ಗೋಮೂತ್ರದಿಂದ ನನ್ನ ಕ್ಯಾನ್ಸರ್ ಗುಣವಾಗಿದೆ ಎಂದು ಆಸ್ಕರ್ ಹೇಳಿದ್ದಾರೆ ಎಂದು ಸುಳ್ಳು ವರದಿ ಮಾಡಿದ ಸುವರ್ಣ ನ್ಯೂಸ್!
ಯಾರೋ ಹೇಳಿದ ಮಾತನ್ನು ಆಸ್ಕರ್ ಗೆ ಜೋಡಿಸಿಬಿಟ್ಟ ಟಿವಿ ಚಾನಲ್
ಏಷ್ಯಾನೆಟ್ ಸುವರ್ಣ ನ್ಯೂಸ್ ಪೋಸ್ಟ್ ಮಾಡಿದ ವೀಡಿಯೋದ ಸ್ಕ್ರೀನ್ ಶಾಟ್
ಹೊಸದಿಲ್ಲಿ, ಮಾ. 20 : ಕಾಂಗ್ರೆಸ್ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ಸದನದಲ್ಲಿ ಮಾಡಿದ ಭಾಷಣದ ತುಣುಕೊಂದನ್ನು ಬಳಸಿಕೊಂಡು "ಅವರು ಗೋಮೂತ್ರದಿಂದ ತನ್ನ ಕ್ಯಾನ್ಸರ್ ಗುಣವಾಗಿದೆ" ಎಂದು ಹೇಳಿದ್ದಾರೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿರುವುದು ತಿಳಿದು ಬಂದಿದೆ.
ಶುಕ್ರವಾರ ಮಧ್ಯಾಹ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರು ರಾಜ್ಯಸಭೆಯಲ್ಲಿ ಮಾತಾಡುವ ವಿಡಿಯೋ ತುಣುಕೊಂದನ್ನು ಹಾಕಿ ಅದಕ್ಕೆ "ಗೋಮೂತ್ರದಿಂದ ಕ್ಯಾನ್ಸರ್ ಗೆದ್ದೆ, ಯೋಗದಿಂದ ನನ್ನ ಮಂಡಿ ನೋವು ಮಾಯವಾಗಿದೆ: ರಾಜ್ಯಸಭೆಯಲ್ಲಿ ಗೋಮೂತ್ರದ ಮಹತ್ವ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಸಂಸದ ಆಸ್ಕರ್ ಫೆರ್ನಾಂಡೀಸ್!", 'Won Cancer Because of Gomutra: Oscar Fernandes in RS', ಎಂದು ಶೀರ್ಷಿಕೆ ನೀಡಿದ್ದರು. ಜೊತೆಗೆ ವಿಡಿಯೋದೊಳಗೆ "ಗೋಮೂತ್ರದಿಂದ ಕ್ಯಾನ್ಸರ್ ಗೆದ್ದೆ", "ಕ್ಯಾನ್ಸರ್ ನಿಂದ ನರಳುತ್ತಿದ್ದೆ, ಗೋಮೂತ್ರ ಚಿಕಿತ್ಸೆಯಿಂದಾಗಿ ಗುಣಮುಖನಾದೆ" "ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಆಸ್ಕರ್ ಫೆರ್ನಾಂಡಿಸ್" ಎಂಬ ಶೀರ್ಷಿಕೆಗಳನ್ನು ವಿಡಿಯೋದೊಳಗೂ ದೊಡ್ಡದಾಗಿ ಹಾಕಿದ್ದರು.
(ಏಷ್ಯಾನೆಟ್ ಸುವರ್ಣ ನ್ಯೂಸ್ ಪೋಸ್ಟ್ ಮಾಡಿದ ವೀಡಿಯೋದ ಸ್ಕ್ರೀನ್ ಶಾಟ್ )
ಆದರೆ ಆಸ್ಕರ್ ಅವರ ಭಾಷಣದ ಪೂರ್ಣ ವಿಡಿಯೋ ರಾಜ್ಯಸಭಾ ಟಿವಿಯ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದ್ದು, ಅದರಲ್ಲಿ ಅವರು ಹೇಳಿದ್ದೇ ಬೇರೆ. ಮೀರಟ್ ನ ಆಶ್ರಮವೊಂದಕ್ಕೆ ತಾನು ಭೇಟಿ ನೀಡಿದ್ದಾಗ ಅಲ್ಲಿನ ಕಾರಿನ ಡ್ರೈವರ್ ಹೀಗೆ ಹೇಳಿದ್ದರು ಎಂದು ಆಸ್ಕರ್ ವಿವರಿಸಿದ್ದರು. ಆದರೆ ಸುವರ್ಣ ನ್ಯೂಸ್ ಡ್ರೈವರ್ ಕುರಿತ ಮಾತನ್ನು ಕತ್ತರಿಸಿ ಸ್ವತಃ ಆಸ್ಕರ್ ಅವರೇ ಕ್ಯಾನ್ಸರ್ ಗೆ ಮೀರಟ್ ಆಶ್ರಮದಲ್ಲಿ ಗೋಮೂತ್ರ ಚಿಕಿತ್ಸೆ ಮಾಡಿಕೊಂಡು ಗುಣಮುಖರಾಗಿ ಬಳಿಕ ಜೀವನವಿಡೀ ಆ ಆಶ್ರಮದ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ವರದಿ ಮಾಡಿಬಿಟ್ಟಿದೆ.
ಇನ್ನೂ ವಿಶೇಷವೆಂದರೆ ಆಸ್ಕರ್ ಎಂದೂ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಲೇ ಇಲ್ಲ. ಇದನ್ನು ಆಸ್ಕರ್ ರ ಆಪ್ತ ಹಾಗೂ ಕಾಂಗ್ರೆಸ್ ಮುಖಂಡ ವಾರ್ತಾಭಾರತಿಗೆ ಖಚಿತಪಡಿಸಿದ್ದಾರೆ. ಆದರೆ ಅವರು ಯೋಗ ಹಾಗು ಇತರ ಪ್ರಕೃತಿ ಚಿಕಿತ್ಸೆಗಳನ್ನು ಬಲವಾಗಿ ಪ್ರತಿಪಾದಿಸುತ್ತಾರೆ ಮತ್ತು ಶುಕ್ರವಾರದ ರಾಜ್ಯಸಭಾ ಭಾಷಣದಲ್ಲೂ ಅವರು ಈ ಬಗ್ಗೆ ಹೇಳಿದ್ದಾರೆ. ಆದರೆ ಅವರು ತನಗೆ ಗೋಮೂತ್ರದಿಂದ ಕ್ಯಾನ್ಸರ್ ಗುಣಮುಖವಾಗಿದೆ ಎಂದು ಹೇಳಲೇ ಇಲ್ಲ.
UPDATE
ವಾರ್ತಾ ಭಾರತಿಯಲ್ಲಿ ಈ ಸುದ್ದಿ ಪ್ರಕಟವಾದ ನಂತರ ಏಷ್ಯಾನೆಟ್ ಸುವರ್ಣ ನ್ಯೂಸ್ ಪೋಸ್ಟ್ ಡಿಲೀಟ್ ಮಾಡಿದೆ.
ಆಸ್ಕರ್ ಫೆರ್ನಾಂಡಿಸ್ ಮಾಡಿದ ಭಾಷಣದ ಪೂರ್ಣ ವಿಡಿಯೋ ಇಲ್ಲಿದೆ :