ಮೊಬೈಲ್ ಕಳ್ಳತನ ಆರೋಪ: ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು
ಕೊಲೆಗೈಯಲ್ಪಟ್ಟ ಮುಹಮ್ಮದ್ ಸಜ್ಜಾದ್ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಲು ಸಿದ್ಧತೆ
ಹೊಸದಿಲ್ಲಿ: ಮೊಬೈಲ್ ಫೋನ್ ಕದ್ದಿದ್ದಾನೆಂದು ಆರೋಪಿಸಿ ವ್ಯಕ್ತಿಯೋರ್ವನನ್ನು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಕಟ್ಟಿಹಾಕಿ ಥಳಿಸಿದ್ದು, ಮಾರಣಾಂತಿಕ ಹಲ್ಲೆಯಿಂದ ವ್ಯಕ್ತಿಯು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯು ದಿಲ್ಲಿಯ ನರೇಲಾದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು hindustantimes.com ವರದಿ ಮಾಡಿದೆ.
ಕೊಲೆಗೈಯಲ್ಪಟ್ಟ ವ್ಯಕ್ತಿಯನ್ನು ಮುಹಮ್ಮದ್ ಸಜ್ಜಾದ್ ಎಂದು ಗುರುತಿಸಲಾಗಿದೆ. ವ್ಯಕ್ತಿಯು ಮೃತಪಟ್ಟಿದ್ದಾನೆಂದು ತಿಳಿದ ಕೂಡಲೇ ಆತನ ಮೃತದೇಹವನ್ನು ಕಾಲುವೆಗೆ ಎಸೆಯಲಾಗಿತ್ತು ಎಂದು ತಿಳಿದು ಬಂದಿದೆ.
"ಹತ್ಯೆಯಲ್ಲಿ ನಾಲ್ಕಕ್ಕಿಂತ ಹೆಚ್ಚು ಮಂದಿ ಭಾಗಿಯಾಗಿದ್ದು, ಈಗಾಗಲೇ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದೇವೆ. ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ" ಎಂದು ಉತ್ತರ ಹೊರ ವಲಯ ಡಿಸಿಪಿ ರಾಜೀವ್ ರಂಜನ್ ಹೇಳಿಕೆ ನೀಡಿದ್ದಾರೆ.
ಈ ನಡುವೆ ಉತ್ತರ ದಿಲ್ಲಿಯ ಆಝಾದ್ ಪುರ್ ಮಂದಿ ಎಂಬಲ್ಲಿ ಇಂತಹದೇ ಪ್ರಕರಣ ನಡೆದಿದ್ದು, ಇಬ್ಬರನ್ನು ಕಳ್ಳತನದ ಶಂಕೆಯಲ್ಲಿ ಹೊಡೆದು ಕೊಲ್ಲಲಾಗಿತ್ತು. ಮೃತಪಟ್ಟ ಇಬ್ಬರ ವಿರುದ್ಧ ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿದ್ದರು ಎಂದು ವರದಿ ತಿಳಿಸಿದೆ. ಇನ್ನು ನರೇಲಾದ ಈ ಪ್ರಕರಣದಲ್ಲಿ ಮೃತ ಮುಹಮ್ಮದ್ ಸಜ್ಜಾದ್ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಲು ನ್ಯಾಯಾಂಗದ ಅನುಮತಿಗೆ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.