"ಮಾ.1ರಿಂದ ಆ.21ರವರೆಗಿನ ಅವಧಿಯ ಸಾಲದ ಕಂತುಗಳಿಗೆ ಯಾವುದೇ ಬಡ್ಡಿ ವಿಧಿಸಬೇಡಿ"
ಬ್ಯಾಂಕ್ ಗಳಿಗೆ ಸುಪ್ರೀಂ ಕೋರ್ಟ್ ಸೂಚನೆ
ಹೊಸದಿಲ್ಲಿ: ಸಾಲ ಮರುಪಾವತಿ ವಿನಾಯಿತಿ ಅವಧಿ (ಮೊರೆಟೇರಿಯಂ) ಇದ್ದ ಕಳೆದ ವರ್ಷದ ಮಾರ್ಚ್ 1ರಿಂದ ಆಗಸ್ಟ್ 21ರವರೆಗಿನ ಸಮಯದ ಸಾಲದ ಕಂತುಗಳಿಗೆ ಯಾವುದೇ ಬಡ್ಡಿಯನ್ನು ಯಾವುದೇ ಸಾಲಗಾರನಿಗೆ ವಿಧಿಸಬಾರದು ಎಂದು ಸುಪ್ರೀಂ ಕೋರ್ಟ್ ಬ್ಯಾಂಕ್ಗಳಿಗೆ ಇಂದು ನಿರ್ದೇಶನ ನೀಡಿದೆ.
ಇಂತಹ ಬಡ್ಡಿಯನ್ನು ಬ್ಯಾಂಕ್ಗಳು ಇಲ್ಲಿಯ ತನಕ ಸಂಗ್ರಹಿಸಿದ್ದೇ ಆಗಿದ್ದಲ್ಲಿ ಮುಂದಿನ ಕಂತುಗಳ ಪಾವತಿ ವೇಳೆ ಅವುಗಳನ್ನು ಹೊಂದಿಸಬೇಕೆಂದು ಸೂಚಿಸಿದೆ.
ಕೆಲವೊಂದು ಸಾಲ ವಿಭಾಗಗಳಿಗೆ ಮಾತ್ರ ಬಡ್ಡಿ ಪಾವತಿ ವಿನಾಯಿತಿಯ ಪ್ರಯೋಜನವನ್ನು ಸೀಮಿತಗೊಳಿಸುವ ಕೇಂದ್ರದ ನೀತಿಯ ಹಿಂದೆ ಯಾವುದೇ ತರ್ಕವಿಲ್ಲ ಎಂದು ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ. ಎಂಡು ನಿರ್ದಿಷ್ಟ ವಿಭಾಗಗಳ ಎರಡು ಕೋಟಿ ರೂಪಾಯಿ ತನಕದ ಸಾಲದ ಬಡ್ಡಿಯ ಮೇಲಿನ ಬಡ್ಡಿಯನ್ನು ಮನ್ನಾಗೊಳಿಸಲು ಅನುಮತಿಸಲು ಕಳೆದ ವರ್ಷ ಕೇಂದ್ರ ನಿರ್ಧರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಅನುಮೋದಿಸಿದ್ದ ಆರು ತಿಂಗಳ ಸಾಲ ಪಾವತಿ ವಿನಾಯಿತಿ ಅವಧಿಯನ್ನು ವಿಸ್ತರಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದು ಅಪೀಲನ್ನು ಕೂಡ ಇಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.