ನಾನು ಇನ್ನು ಮುಂದೆ ಆರೆಸ್ಸೆಸ್ ಅನ್ನು ಸಂಘಪರಿವಾರ ಎನ್ನುವುದಿಲ್ಲ ಏಕೆಂದರೆ..: ರಾಹುಲ್ ಗಾಂಧಿ
ನವದೆಹಲಿ: ಸಂಘ ಪರಿವಾರ ಎಂಬುವುದರ ಅರ್ಥ ಕುಟುಂಬ ಎಂದಾಗಿದ್ದು, ಒಂದು ಕುಟುಂಬದಲ್ಲಿ ಮಹಿಳೆಯರು, ಹಿರಿಯರ ಬಗ್ಗೆ ಗೌರವ, ಸಹಾನುಭೂತಿ ಮತ್ತು ವಾತ್ಸಲ್ಯವಿರುತ್ತದೆ. ಆದರೆ ಆರೆಸ್ಸೆಸ್ ಮತ್ತು ಅದಕ್ಕೆ ಸಂಬಂಧಿತ ಗುಂಪುಗಳನ್ನು 'ಸಂಘ ಪರಿವಾರ' ಎಂದು ಕರೆಯುವುದು ಸರಿಯಲ್ಲ. ನಾನು ಕರೆಯುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೇರಳ ಮೂಲದ ಕ್ರೈಸ್ತ ಸನ್ಯಾಸಿಗಳಿಗೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿ ಕಿರುಕುಳ ನೀಡಿದ ಘಟನೆಯ ಒಂದು ದಿನದ ನಂತರ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಈ ಘಟನೆಯು ಆರೆಸ್ಸೆಸ್ ನ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಮೂಲಕ ಅಲ್ಪಸಂಖ್ಯಾತರನ್ನು ಮೆಟ್ಟಿಹಾಕುವ ʼಕೆಟ್ಟ ಪ್ರಚಾರʼ ದ ಪರಿಣಾಮವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಗುರುವಾರ ಹಿಂದಿ ಭಾಷೆಯಲ್ಲಿ ಮಾಡಿದ ಟ್ವೀಟ್ ನಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಇನ್ನು ಮುಂದೆ 'ಸಂಘ ಪರಿವಾರ್' ಎಂದು ಉಲ್ಲೇಖಿಸುವುದಿಲ್ಲ ಎಂದು ಹೇಳಿದರು.
"ಆರೆಸ್ಸೆಸ್ ಮತ್ತು ಸಂಬಂಧಿತ ಸಂಸ್ಥೆಗಳನ್ನು ಸಂಘ ಪರಿವಾರ್ ಎಂದು ಕರೆಯುವುದು ಸರಿಯಲ್ಲ ಎಂದು ನಾನು ನಂಬುತ್ತೇನೆ. ಒಂದು ಕುಟುಂಬದಲ್ಲಿ ಮಹಿಳೆಯರಿರುತ್ತಾರೆ. ವೃದ್ಧರ ಬಗ್ಗೆ ಗೌರವವಿರುತ್ತದೆ ಸಹಾನುಭೂತಿ ಮತ್ತು ವಾತ್ಸಲ್ಯದ ಭಾವನೆ ಇರುತ್ತದೆ. ಆದರೆ ಇದು ಯಾವುದೂ ಆರೆಸ್ಸೆಸ್ ನಲ್ಲಿ ಇಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.