ದಿಲ್ಲಿ: ನೈಜೀರಿಯಾದ ಪ್ರಜೆ ಸಾವು; ಪೊಲೀಸರ ಥಳಿತ ಆರೋಪ
ಹೊಸದಿಲ್ಲಿ, ಮಾ.28: ದಿಲ್ಲಿಯ ತಿಲಕನಗರದಲ್ಲಿ ನೈಜೀರಿಯಾದ ಪ್ರಜೆಯೊಬ್ಬ ಮೃತಪಟ್ಟಿದ್ದು ಪೊಲೀಸರ ಥಳಿತದಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿದ ಗುಂಪೊಂದು ತಿಲಕನಗರ ಠಾಣೆಯ ಹೊರಗಡೆ ಗುಂಪುಗೂಡಿದ್ದರಿಂದ ಪ್ರದೇಶದಲ್ಲಿ ಆತಂಕದ ಪರಿಸ್ಥಿತಿ ನೆಲೆಸಿದೆ ಎಂದು ವರದಿಯಾಗಿದೆ.
ಪರಿಸ್ಥಿತಿ ನಿಯಂತ್ರಿಸಲು ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ರವಿವಾರ ಬೆಳಿಗ್ಗೆ ಸುಮಾರು 4 ಗಂಟೆಯ ವೇಳೆಗೆ ನೈಜೀರಿಯಾದ ಪ್ರಜೆಯೊಬ್ಬನನ್ನು ಡಿಡಿಯು ಆಸ್ಪತ್ರೆಗೆ ತರಲಾಗಿದ್ದು ಆ ವೇಳೆಗಾಗಲೇ ಆತ ಮೃತಪಟ್ಟಿದ್ದ. ಮೃತ ವ್ಯಕ್ತಿ ತಿಲಕನಗರದಲ್ಲಿ ವಾಸಿಸುತ್ತಿದ್ದು ಪೊಲೀಸರು ತಲೆಗೆ ಲಾಠಿಯಿಂದ ಹೊಡೆದಿರುವುದು ಸಾವಿಗೆ ಕಾರಣವೆಂದು ಮೃತ ವ್ಯಕ್ತಿಯೊಂದಿಗೆ ಇದ್ದ ಇತರ ಇಬ್ಬರು ನೈಜೀರಿಯ ಪ್ರಜೆಗಳು ಆರೋಪಿಸಿದ್ದಾರೆ.
ಬೆಳಿಗ್ಗೆ ಗಸ್ತು ತಿರುಗುತ್ತಿದ್ದ ಪೊಲೀಸರು ರಸ್ತೆಯಲ್ಲಿದ್ದ 3 ನೈಜೀರಿಯಾ ಪ್ರಜೆಗಳನ್ನು ತಡೆದಿದ್ದಾರೆ. ಗುರುತು ಚೀಟಿ ತೋರಿಸುವಂತೆ ಸೂಚಿಸಿದಾಗ ಅವರು ಅಲ್ಲಿಂದ ಓಡಿಹೋದರು. ಪೊಲೀಸರು ಅವರ ಬೆನ್ನಟ್ಟಿ ಓಡಿದ್ದಾರೆ. ಆದರೆ ಲಾಠಿಯಿಂದ ಹೊಡೆದಿಲ್ಲ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲೂ ದೇಹದಲ್ಲಿ ಹೊಸ ಬಾಹ್ಯ ಗಾಯ ಉಂಟಾಗಿಲ್ಲವೆಂದು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.