ಬಿಜೆಪಿಗಿರುವ ಬೆಂಬಲ ನೋಡಿ ದೀದಿ ಮತ್ತು ಗೂಂಡಾಗಳು ಪ್ರಕ್ಷುಬ್ಧರಾಗಿದ್ದಾರೆ: ಪ್ರಧಾನಿ ಮೋದಿ
"ಕೂಚ್ ಬೆಹಾರ್ ನಲ್ಲಿ ಮೃತಪಟ್ಟವರಿಗೆ ನಾನು ಸಂತಾಪ ಸೂಚಿಸುತ್ತಿದ್ದೇನೆ"
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಿಲಿಗುರಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. "ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷಕ್ಕಿರುವ ಬೆಂಬಲವನ್ನು ನೋಡಿ ದೀದಿ ಮತ್ತು ಅವರ ಗೂಂಡಾಗಳು ಪ್ರಕ್ಷುಬ್ಧರಾಗಿದ್ದಾರೆ" ಎಂದು ಅವರು ಹೇಳಿಕೆ ನೀಡಿದ್ದಾರೆ.
"ನಾನು ದೀದಿಯೊಂದಿಗೆ ಹೇಳಬಯಸುತ್ತೇನೆ. ನಿಮ್ಮ ಮತ್ತು ನಿಮ್ಮ ಟಿಎಂಸಿ ಗೂಂಡಾಗಳ ಕಾರ್ಯಚಟುವಟಿಕೆಗಳು ಇನ್ನು ನಡೆಯುವುದಿಲ್ಲ. ಕೂಚ್ ಬೆಹಾರ್ ನಲ್ಲಿ ಟಿಎಂಸಿ ಗೂಂಡಾಗಳು ತೋರಿದ ವರ್ತನೆ ಅತೀರೇಕವಾದದ್ದು. ಈ ಕುರಿತಾದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಾನು ಮನವಿ ಮಾಡುತ್ತಿದ್ದೇನೆ" ಎಂದು ಪ್ರಧಾನಿ ಹೇಳಿದ್ದಾರೆ.
"ಕೂಚ್ ಬೆಹಾರ್ ನಲ್ಲಿ ನಡೆದಿರುವ ಘಟನೆಯು ನಿಜಕ್ಕೂ ದುಃಖಕರವಾಗಿದೆ. ಈ ಘಟನೆಯಲ್ಲಿ ಮೃತಪಟ್ಟಿರುವವರ ಕುಟುಂಬದೊಂದಿಗೆ ನಾನು ಸಹಾನುಭೂತಿ ವ್ಯಕ್ತಪಡಿಸುತ್ತಿದ್ದೇನೆ. ದೀದಿ ಮತ್ತು ಗೂಂಡಾಗಳು ಬಿಜೆಪಿಗೆ ದೊರಕುತ್ತಿರುವ ಬೆಂಬಲ ನೋಡಿ ಪ್ರಕ್ಷುಬ್ಧರಾಗಿದ್ದಾರೆ. ಆಕೆಯ ಕುರ್ಚಿಯು ಜಾರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿರುವ ಕಾರಣ ಅವರು ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆ" ಎಂದು ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಹೇಳಿದರು.
ಕೂಚ್ ಬೆಹಾರ್ ನ ಮತಗಟ್ಟೆಯ ಹೊರಗಡೆ ಭದ್ರತಾ ಪಡೆಗಳು ಮತ್ತು ಟಿಎಂಸಿ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ನಾಲ್ವರು ಗುಂಡಿನ ದಾಳಿಗೆ ಬಲಿಯಾಗಿದ್ದರು.