ಹಲವು ರಾಜ್ಯಗಳಲ್ಲಿ ಲಸಿಕೆಗಳ ಕೊರತೆ ನಡುವೆ ಲಸಿಕೆ ಉತ್ಸವಕ್ಕೆ ಚಾಲನೆ
ಹೊಸದಿಲ್ಲಿ: ಹಲವು ರಾಜ್ಯಗಳು ಲಸಿಕೆಗಳ ಕೊರತೆ ಎದುರಿಸುತ್ತಿರುವ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಖ್ಯಮಂತ್ರಿಗಳೊಂದಿಗೆ ನಡೆಸಿರುವ ಸಭೆಯಲ್ಲಿ ಘೋಷಿಸಿರುವ ನಾಲ್ಕು ದಿನಗಳ ಟಿಕಾ ಉತ್ಸವ(ಲಸಿಕೆ ಉತ್ಸವ)ಕ್ಕೆ ರವಿವಾರ ಚಾಲನೆ ನೀಡಲಾಗಿದೆ. ದೇಶದಲ್ಲಿ ಈ ತನಕ 10 ಕೋಟಿ ಜನರು ಲಸಿಕೆಯನ್ನು ಸ್ವೀಕರಿಸಿದ್ದಾರೆ.
ಮಹಾರಾಷ್ಟ್ರವಲ್ಲದೆ ಪಂಜಾಬ್, ದಿಲ್ಲಿ ಹಾಗೂ ರಾಜಸ್ಥಾನದಲ್ಲೂ ಲಸಿಕೆಗಳ ಕೊರತೆ ಎದುರಾಗಿದೆ.
ಕೇವಲ 5 ದಿನಗಳಿಗಾಗುವಷ್ಟು ಲಸಿಕೆಗಳು ಉಳಿದಿವೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.
ರಾಜ್ಯದಲ್ಲಿ 2 ದಿನಗಳಿಗಾಗುವಷ್ಟು ಲಸಿಕೆಗಳು ದಾಸ್ತಾನಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ 7ರಿಂದ 10 ದಿನಗಳಿಗಾಗುವಷ್ಟು ಲಸಿಕೆಗಳ ದಾಸ್ತಾನಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಇಂದು ಬೆಳಗ್ಗೆ ಹೇಳಿಕೆಯನ್ನು ನೀಡಿರುವ ಪ್ರಧಾನಿ ಮೋದಿ, ಪ್ರತಿಯೊಬ್ಬರು ಇನ್ನೊಬ್ಬರಿಗೆ ಲಸಿಕೆ ನೀಡಲು ನೆರವಾಗಬೇಕು. ಸುರಕ್ಷಿತ ಕ್ರಮ ತೆಗೆದುಕೊಳ್ಳಬೇಕು ಹಾಗೂ ಕೋವಿಡ್ ಚಿಕಿತ್ಸೆಗೆ ನೆರವಾಗಬೇಕು ಎಂದು ವಿನಂತಿಸಿದ್ದರು.