ಸರಕಾರ ಆಹ್ವಾನಿಸಿದರೆ ಮಾತುಕತೆಗೆ ಸಿದ್ಧ, ಆದರೆ ಬೇಡಿಕೆಯಲ್ಲಿ ಬದಲಾವಣೆ ಇಲ್ಲ: ರಾಕೇಶ್ ಟಿಕಾಯತ್
ಕೃಷಿ ಕಾನೂನು ವಿರೋಧಿಸಿ ರೈತರ ಪ್ರತಿಭಟನೆ
ಹೊಸದಿಲ್ಲಿ: ಮೂರು ವಿವಾದಾತ್ಮಕ ಹೊಸ ಕೃಷಿ ಕಾನೂನುಗಳ ವಿರುದ್ದ ಪ್ರತಿಭಟಿಸುತ್ತಿರುವ ರೈತರನ್ನು ಕೇಂದ್ರ ಸರಕಾರ ಮಾತುಕತೆಗೆ ಆಹ್ವಾನಿಸಿದರೆ ಮಾತುಕತೆಗೆ ಸಿದ್ದರಾಗಿದ್ದಾರೆ. ಜನವರಿ 22ರಂದು ಕೊನೆಗೊಂಡಿದ್ದ ಮಾತುಕತೆ ಪುನರಾರಂಭಿಸಲು ಸಿದ್ಧ. ಆದರೆ ನಮ್ಮ ಬೇಡಿಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ರವಿವಾರ ಹೇಳಿದ್ದಾರೆ.
ಮಾತುಕತೆ ಪುನರಾರಂಭಿಸಲು 2020ರ ನವೆಂಬರ್ ರಿಂದ ದಿಲ್ಲಿಯ ಮೂರು ಗಡಿಭಾಗಗಳಾದ ಸಿಂಘು, ಟಿಕ್ರಿ ಹಾಗೂ ಘಾಝಿಪುರ್ ನಲ್ಲಿ ಬೀಡುಬಿಟ್ಟಿರುವ ಪ್ರತಿಭಟನಕಾರರನ್ನು ಪ್ರತಿನಿದಿಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ)ವನ್ನು ಸರಕಾರವು ಮಾತುಕತೆಗೆ ಆಹ್ವಾನಿಸಬೇಕು ಎಂದು ಅವರು ಹೇಳಿದರು.
ಸರಕಾರದೊಂದಿಗಿನ ಮಾತುಕತೆ ಜನವರಿ 22ರಂದು ಕೊನೆಗೊಂಡ ಸ್ಥಳದಿಂದ ಆರಂಭವಾಗುತ್ತದೆ. ಎಲ್ಲಾ ಮೂರು ಕಪ್ಪು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು.ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ)ನೀಡಬೇಕೆಂಬ ಬೇಡಿಕೆಯಲ್ಲಿ ಬದಲಾವಣೆ ಇಲ್ಲ ಎಂದು ಟಿಕಾಯತ್ ಹೇಳಿಕೆಯನ್ನು ಉಲ್ಲೇಖಿಸಿ ಬಿಕೆಯು ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ತಿಳಿಸಿದ್ದಾರೆ.
ಕೊರೋನ ವೈರಸ್ ಹೆಚ್ಚುತ್ತಿರುವ ಮಧ್ಯೆ ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ಪುನರಾರಂಭಿಸುವಂತೆ ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಬಿಕೆಯು ರಾಷ್ಟ್ರೀಯ ವಕ್ತಾರರು ಈ ಹೇಳಿಕೆ ನೀಡಿದ್ದಾರೆ.