ಉತ್ತರ ಪ್ರದೇಶ: ಆರೋಗ್ಯ ಇಲಾಖೆ ವೈಖರಿ ವಿರುದ್ಧ ರಾಜ್ಯ ಸಚಿವರಿಂದಲೇ ಆಕ್ರೋಶ!
ಲಕ್ನೋ, ಎ.14: ರಾಜ್ಯ ರಾಜಧಾನಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರುತ್ತಿದ್ದರೂ, ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆದಿತ್ಯನಾಥ್ ಸಂಪುಟದ ಕಾನೂನು ಸಚಿವ ಬೃಜೇಶ್ ಪಾಠಕ್ ಆಕ್ರೋಶ ವ್ಯಕ್ತಪಡಿಸಿರುವುದು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ.
ರಾಜ್ಯದಲ್ಲಿ ಮಂಗಳವಾರ ಒಟ್ಟು 18,021 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ರಾಜಧಾನಿಯಲ್ಲೇ 5,382 ಪ್ರಕರಣಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾಯದರ್ಶಿ ಅಲೋಕ್ ಕುಮಾರ್ ಅವರಿಗೆ ಬರೆದಿದ್ದ ಗೌಪ್ಯ ಪತ್ರ ಬಹಿರಂಗವಾಗಿದೆ.
"ಖಾಸಗಿ ಪ್ರಯೋಗಾಲಯಗಳಲಿ ಕೋವಿಡ್ ಪರೀಕ್ಷೆ ಸ್ಥಗಿತಗೊಳಿಸಲು ಸೂಚಿಸಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಪ್ರಯೋಗಾಲಯಗಳಲ್ಲಿ ಪರೀಕ್ಷಾ ವರದಿಗಳನ್ನು ಪಡೆಯಲು 4-5 ದಿನ ಬೇಕಾಗುತ್ತದೆ ಎನ್ನುವುದು ಆಘಾತಕಾರಿ ಸಂಗತಿ" ಎಂದು ಸಚಿವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜ್ಯ ಸರ್ಕಾರ ಸಾಂಕ್ರಾಮಿಕವನ್ನು ನಿರ್ಬಂಧಿಸಲು ವಿಫಲವಾಗಿರುವ ಬಗ್ಗೆ ವಿರೋಧ ಪಕ್ಷಗಳಿಗೆ ಇದು ದೊಡ್ಡ ಅಸ್ತ್ರ ಒದಗಿಸಿದೆ.
ಕೇಂದ್ರ ಲಕ್ನೋ ಶಾಸಕರಾಗಿರುವ ಪಾಠಕ್ ಅವರಿಗೆ ಖ್ಯಾತ ಲೇಖಕ ಯೋಗೀಶ್ ಪ್ರವೀಣ್ ಅವರ ಮನೆಯಿಂದ ದೂರವಾಣಿ ಕರೆ ಬಂದಿತ್ತು. ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಬೇಕು ಎಂದು ಮನವಿ ಮಾಡಿದ್ದರು. "ನಾನು ಲಕ್ನೋ ಮುಖ್ಯ ವೈದ್ಯಾಧಿಕಾರಿಯನ್ನು ಸಂಪರ್ಕಿಸಿದೆ. ಆದರೆ ಆ್ಯಂಬುಲೆನ್ಸ್ ತಲುಪಲೇ ಇಲ್ಲ. ಯೋಗೀಶ್ ಪ್ರವೀಣ್ ಮೃತಪಟ್ಟರು" ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಲಕ್ನೋದಲ್ಲಿ ಪ್ರತಿದಿನ 17 ಸಾವಿರ ಪರೀಕ್ಷಾ ಕಿಟ್ಗಳ ಅಗತ್ಯವಿದ್ದು, 10 ಸಾವಿರ ಮಾತ್ರ ಲಭ್ಯವಿದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.