ಸುಲಿಗೆ ಪ್ರಕರಣ: ಬಿಜೆಪಿ ಪಂಚಾಯತ್ ಸದಸ್ಯ ಸೇರಿದಂತೆ ಮೂವರ ಬಂಧನ
ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪ್ರದೇಶದಲ್ಲಿ ಸುಲಿಗೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪಂಚಾಯತ್ ಸದಸ್ಯ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಎಪ್ರಿಲ್ 3 ಹಾಗೂ 4 ರ ಮಧ್ಯರಾತ್ರಿ ಕೆಲವು ಅಪರಿಚಿತ ವ್ಯಕ್ತಿಗಳು ಶಸ್ತ್ರಾಸ್ತ್ರಗಳೊಂದಿಗೆ ನಾಡಿಹಾಲ್ ನಲ್ಲಿರುವ ಅಳಿಯಂದಿರ ಮನೆಗೆ ನುಗ್ಗಿ ದಕ್ಷಿಣ ಕಾಶ್ಮೀರದ ಒಂದು ಸ್ಥಳದಲ್ಲಿ ಬಿಟ್ಟುಬರುವಂತೆ ಹೇಳಿದರು ಎಂದು ಸೋಪೊರ್ ನ ಪಂಝಿಪೊರಾದ ಗುಲಾಂ ಮುಹಮ್ಮದ್ ಶೇಖ್ ಅವರ ಪುತ್ರ ಮುದಾಸಿರ್ ಅಹ್ಮದ್ ಶೇಖ್ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪಂಜಲ್ಲಾ ರಫಿಯಾಬಾದ್ನ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 450, 506 ಐಪಿಸಿ ಮತ್ತು 7/25 ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ಐಆರ್ ಸಂಖ್ಯೆ 20 ದಾಖಲಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಬಿಜೆಪಿಯ ಪಂಚಾಯತ್ ಸದಸ್ಯ ಮೆಹ್ರಾಜುದ್ದೀನ್ ರಾಥರ್ ಅವರನ್ನು ಕರೆಸಿ ಪ್ರಶ್ನಿಸಲಾಗಿತ್ತು. ಆಗ ಆತ ಮೂರು ಜನರೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.