ಚುನಾವಣೆಗಳಿಗೂ ಕೋವಿಡ್-19 ಪ್ರಕರಣಗಳ ಏರಿಕೆಗೂ ತಳುಕು ಹಾಕುವುದು ಸರಿಯಲ್ಲ: ಗೃಹಸಚಿವ ಅಮಿತ್ ಶಾ
ಹೊಸದಿಲ್ಲಿ,ಎ.18: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳಕ್ಕೂ ಚುನಾವಣೆಗಳಿಗೂ ತಳುಕು ಹಾಕುವುದು ಸರಿಯಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಚುನಾವಣೆಗಳು ನಡೆಯದ ರಾಜ್ಯಗಳಲ್ಲಿಯೂ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಚುನಾವಣೆ ನಡೆಯದ ಮಹಾರಾಷ್ಟ್ರದಲ್ಲಿ 60,000 ಪ್ರಕರಣಗಳು ವರದಿಯಾಗುತ್ತಿದ್ದರೆ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ 4,000 ಪ್ರಕರಣಗಳು ದಾಖಲಾಗುತ್ತಿವೆ. ತಾನು ಇವೆರಡೂ ರಾಜ್ಯಗಳ ಬಗ್ಗೆ ಕಾಳಜಿ ವಹಿಸಿದ್ದೇನೆ. ಚುನಾವಣೆಗಳು ನಡೆಯದ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ನೀವೇನು ಹೇಳುತ್ತೀರಿ ಎಂದು ಆಂಗ್ಲಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಾ ಪ್ರಶ್ನಿಸಿದರು.
ರೂಪಾಂತರಿತ ಕೊರೋನವೈರಸ್ ಪ್ರಕರಣಗಳಲ್ಲಿ ಭಾರೀ ಏರಿಕೆಗೆ ಕಾರಣವಾಗಿದೆ ಎಂದ ಅವರು,ಹಲವಾರು ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಆ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ ಮತ್ತು ಈಗಲೇ ನಿರ್ಧಾರಕ್ಕೆ ಬರುವುದು ಅವಸರವಾಗುತ್ತದೆ ಎಂದರು.
‘ತಜ್ಞರು ಮತ್ತು ಸಂಬಂಧಿತರೊಂದಿಗೆ ಚರ್ಚೆಗಳು ನಡೆಯುತ್ತಿವೆ, ಪ್ರಸಕ್ತ ಸ್ಥಿತಿಯಲ್ಲಿ ಸರಕಾರವು ಅವಸರದಿಂದ ಲಾಕ್ಡೌನ್ ಹೇರುವ ಅಗತ್ಯವಿಲ್ಲ. ಆರಂಭದಲ್ಲಿ ಲಾಕ್ಡೌನ್ ಉದ್ದೇಶ ಬೇರೆಯದೇ ಆಗಿತ್ತು. ನಾವು ಮೂಲಸೌಕರ್ಯ ಮತ್ತು ಚಿಕಿತ್ಸೆಗೆ ಅಗತ್ಯ ವ್ಯವಸ್ಥೆಗಳನ್ನು ಸಿದ್ಧಗೊಳಿಸಲು ಬಯಸಿದ್ದೆವು, ನಮ್ಮ ಬಳಿ ಔಷಧಿಗಳು ಅಥವಾ ಲಸಿಕೆಗಳು ಇರಲಿಲ್ಲ. ಈಗ ಬೇರೆಯೇ ಸ್ಥಿತಿಯಿದೆ ’ ಎಂದ ಶಾ,ಕೇಂದ್ರವು ರಾಜ್ಯಗಳೊಡನೆ ಚರ್ಚೆಯನ್ನು ಮುಂದುವರಿಸುತ್ತದೆ ಮತ್ತು ಸಹಮತದ ನಿರ್ಧಾರದಂತೆ ಮುಂದಡಿಯಿಡುತ್ತೇವೆ ಎಂದರು.
ದೇಶದಲ್ಲಿ ಪರಿಸ್ಥಿತಿ ತೀರ ಹದಗೆಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರು ಮಾಸ್ಕ್ಗಳನ್ನು ಧರಿಸದೆ ಬೃಹತ್ ರ್ಯಾಲಿಗಳು ಮತ್ತು ರೋಡ್ಶೋಗಳಲ್ಲಿ ಭಾಗಿಯಾಗುತ್ತಿದ್ದಾರೆ. ಧಾರ್ಮಿಕ ಸಮಾವೇಶಗಳು ಮತ್ತು ರೈತರ ಪ್ರತಿಭಟನೆ ಕೊರೋನವೈರಸ್ನ ‘ಸೂಪರ್ ಸ್ಪ್ರೆಡರ್ ’ಆಗಲಿವೆ ಎಂದು ತಜ್ಞರೂ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರವು ಕೊರೋನವೈರಸ್ನ ಮೊದಲ ಅಲೆಯ ಸಂದರ್ಭದಲ್ಲಿ ವಹಿಸಿದ್ದಷ್ಟು ಎಚ್ಚರವನ್ನು ಎರಡನೇ ಅಲೆಯ ಬಗ್ಗೆ ವಹಿಸಿರಲಿಲ್ಲ ಎಂಬ ಆರೋಪಗಳನ್ನು ತಿರಸ್ಕರಿಸಿದ ಶಾ,‘ರಾಜ್ಯಗಳ ಮುಖ್ಯಮಂತ್ರಿಗಳೊಡನೆ ಎರಡು ಸಭೆಗಳನ್ನು ನಡೆಸಲಾಗಿದ್ದು,ನಾನೂ ಉಪಸ್ಥಿತನಿದ್ದೆ. ಈ ಬಾರಿ ಸಾಂಕ್ರಾಮಿಕವು ವೇಗವಾಗಿ ಹರಡುತ್ತಿದ್ದು,ಅದರ ವಿರುದ್ಧ ಹೋರಾಡುವುದು ಕೊಂಚ ಕಷ್ಟವಾಗುತ್ತಿದೆ. ಆದರೆ ಇದರಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ ’ಎಂದರು.