ದಿಲ್ಲಿಯಲ್ಲಿ ಇಂದು ರಾತ್ರಿಯಿಂದ ಮುಂದಿನ ಸೋಮವಾರದ ತನಕ ಸಂಪೂರ್ಣ ಕರ್ಫ್ಯೂ
ಹೊಸದಿಲ್ಲಿ: ಕೊರೋನ ವೈರಸ್ ಪ್ರಕರಣಗಳ ದಾಖಲೆಯ ಏರಿಕೆಯ ನಡುವೆ ದಿಲ್ಲಿಯಲ್ಲಿ ಇಂದು ರಾತ್ರಿಯಿಂದ ಮುಂದಿನ ಸೋಮವಾರ ಬೆಳಗ್ಗಿನ ತನಕ ಸಂಪೂರ್ಣ ಕಫ್ರ್ಯೂ ವಿಧಿಸಲಾಗುತ್ತದೆ.
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಂದು ಬೆಳಗ್ಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಭೇಟಿಯಾದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಎಲ್ಲಾ ಖಾಸಗಿ ಕಚೇರಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತವೆ. ಸರಕಾರಿ ಕಚೇರಿಗಳು ಹಾಗೂ ಅಗತ್ಯ ಸೇವೆಗಳು ಮಾತ್ರ ತೆರೆದಿರುತ್ತವೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ಆದೇಶದಲ್ಲಿ ದಿಲ್ಲಿಯಲ್ಲಿ ಸಭಾಂಗಣಗಳು, ರೆಸ್ಟೋರೆಂಟ್ ಗಳು, ಮಾಲ್ ಗಳು, ಜಿಮ್ ಗಳು ಹಾಗೂ ಸ್ಪಾಗಳನ್ನು ಮುಚ್ಚಲಾಗಿತ್ತು. ಎಲ್ಲಾ ಸಾಮಾಜಿಕ,ಧಾರ್ಮಿಕ ಅಥವಾ ರಾಜಕೀಯ ಸಮಾವೇಶಗಳನ್ನು ನಿಷೇಧಿಸಲಾಗಿತ್ತು.
ರವಿವಾರ ದಿಲ್ಲಿಯಲ್ಲಿ ಒಂದೇ ದಿನ 25,462 ಹೊಸ ಪ್ರಕರಣ ವರದಿಯಾಗಿದ್ದು, ಇದು ಗರಿಷ್ಠ ದೈನಂದಿನ ಏರಿಕೆಯಾಗಿದೆ.
ದಿಲ್ಲಿಯಲ್ಲೀಗ ವಾರಾಂತ್ಯದ ಕಫ್ರ್ಯೂ ನಡೆಯುತ್ತಿದೆ. ರಾಜಧಾನಿಯ ಆಸ್ಪತ್ರೆಗಳಲ್ಲಿ 100ಕ್ಕಿಂತ ಕಡಿಮೆ ಐಸಿಯು ಹಾಸಿಗೆಗಳು ಲಭ್ಯವಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.