ವಿಕಾಸ್ ದುಬೆ ಎನ್ಕೌಂಟರ್: ಉತ್ತರಪ್ರದೇಶ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದ ತನಿಖಾ ಆಯೋಗ
ಹೊಸದಿಲ್ಲಿ: ಕಳೆದ ವರ್ಷ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಸಾಯಿಸಿರುವ ಉತ್ತರಪ್ರದೇಶ ಪೊಲೀಸರ ವಿರುದ್ದ ಪುರಾವೆ ಇಲ್ಲ ಎಂದು ತನಿಖಾ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ. ಸಾರ್ವಜನಿಕರು, ಮಾಧ್ಯಮಗಳು, ಅಪರಾಧಿಗಳ ಕುಟುಂಬ ಮುಂದೆ ಬಂದು ಪುರಾವೆ ಒದಗಿಸಿಲ್ಲ ಎಂದು ಆಯೋಗ ತಿಳಿಸಿದೆ.
ವಿಕಾಸ್ ದುಬೆ ಹೊಂಚುದಾಳಿ ನಡೆಸಿ ಉತ್ತರಪ್ರದೇಶದ 8 ಪೊಲೀಸರನ್ನು ಹತ್ಯೆಗೈದಿದ್ದ. ಕಳೆದ ವರ್ಷ ಜುಲೈನಲ್ಲಿಉತ್ತರಪ್ರದೇಶ ಪೊಲೀಸರು ವಿಕಾಸ್ ದುಬೆ ಹಾಗೂ ಆತನ ಐವರು ಸಹಚರರನ್ನು ಸಾಯಿಸಿದ್ದರು.
ವಿಕಾಸ್ ದುಬೆಯನ್ನು ಪೊಲೀಸ್ ಬೆಂಗಾವಲಿನಲ್ಲಿ ಉತ್ತರಪ್ರದೇಶಕ್ಕೆ ಕರೆ ತರುವಾಗ ದುಬೆ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ ಹೊಡೆದಿದ್ದು, ದುಬೆ ಪೊಲೀಸರ ಬಂದೂಕನ್ನು ಕಿತ್ತು ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದರು.
ಪೊಲೀಸರ ಎನ್ಕೌಂಟರ್ ಖಂಡಿಸುವ ಯಾವುದೇ ವಸ್ತು ಪುರಾವೆಗಳಿಲ್ಲ. ಅದನ್ನು ಬೆಂಬಲಿಸಲು ಸಾಕಷ್ಟು ವಸ್ತುಗಳಿವೆ ಎಂದು ಮೂವರು ಸದಸ್ಯರ ವಿಚಾರಣಾ ಸಮಿತಿಯು ಉತ್ತರಪ್ರದೇಶ ಸರಕಾರ ಹಾಗೂ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.
ಎನ್ ಕೌಂಟರ್ ಕುರಿತು ತನಿಖೆ ನಡೆಸಬೇಕೆಂದು ಕೋರಿ ಮನವಿ ಮಾಡಿದ ನಂತರ ನ್ಯಾಯಾಂಗ ಸಮಿತಿಯನ್ನು ಸುಪ್ರೀಂಕೋರ್ಟ್ ರಚಿಸಿತ್ತು.
ಪೊಲೀಸರ ವಿರುದ್ದ ಯಾರೂ ಕೂಡ ಪುರಾವೆಯೊಂದಿಗೆ ಮುಂದೆ ಬರಲಿಲ್ಲ ಎಂದು ಜಸ್ಟಿಸ್ ಬಿಎಸ್ ಚೌಹಾಣ್ ಅಧ್ಯಕ್ಷತೆಯ ತನಿಖಾ ಆಯೋಗ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.