ಆಮ್ಲಜನಕ ಪೂರೈಕೆ, ಕೋವಿಡ್ ಲಸಿಕೆ ನೀಡಿಕೆ ಕುರಿತು ನಿಮ್ಮ ಯೋಜನೆಯೇನು?: ಕೇಂದ್ರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ದೇಶದಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬರುತ್ತಿದೆ. ಇಂದು ಒಂದೇ ದಿನದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಪಾಸಿಟಿವ್ ಆಗಿದ್ದು, ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಪೂರೈಕೆ, ಕೋವಿಡ್ ಲಸಿಕೆ ನೀಡುವಿಕೆ ಹಾಗೂ ಇನ್ನಿತರ ಆರೋಗ್ಯ ಸಂಬಂಧಿತ ವಿಚಾರಗಳಲ್ಲಿ ನಿಮ್ಮ ಯೋಜನೆಯ ಕುರಿತು ತಿಳಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ತಿಳಿಸಿದೆ.
"ನಾವು ಈ ವಿಷಯದ ಬಗ್ಗೆ ರಾಷ್ಟ್ರೀಯ ಯೋಜನೆಯನ್ನು ನೋಡಲು ಬಯಸುತ್ತೇವೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಹೇಳಿದರು.
ದೇಶಾದ್ಯಂತ ಆರು ಹೈಕೋರ್ಟ್ಗಳು ಆಸ್ಪತ್ರೆಗಳಲ್ಲಿನ ಆಮ್ಲಜನಕ, ಹಾಸಿಗೆಗಳು ಮತ್ತು ಆಂಟಿ-ವೈರಲ್ ಔಷಧ ರೆಮ್ಡೆಸಿವಿರ್ನ ಬಿಕ್ಕಟ್ಟನ್ನು ಒಳಗೊಂಡ ಸಂಬಂಧಿತ ಅರ್ಜಿಗಳನ್ನು ಆಲಿಸುತ್ತಿರುವ ಸಮಯದಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ.
"ಆಕ್ಸಿಜನ್ ಪೂರೈಕೆ, ಅಗತ್ಯ ಔಷಧಗಳ ಪೂರೈಕೆ, ಲಸಿಕೆ ನೀಡುವಿಕೆಯ ವಿಧಾನ ಮತ್ತು ರೀತಿಗಳ ಕುರಿತಾದಂತೆ ನಾಲ್ಕು ವಿಷಯಗಳನ್ನು ನಾವು ತಿಳಿದುಕೊಳ್ಳಲು ಬಯಸುತ್ತಿದ್ದೇವೆ. ರಾಜ್ಯಗಳಲ್ಲಿ ಲಾಕ್ ಡೌನ್ ಹೇರುವ ಅಧಿಕಾರವನ್ನು ನಾವು ಉಳಿಸಿಕೊಳ್ಳಲು ಬಯಸಿದ್ದೇವೆ. ದಿಲ್ಲಿ, ಬಾಂಬೆ, ಸಿಕ್ಕಿಂ, ಮಧ್ಯಪ್ರದೇಶ, ಕಲ್ಕತ್ತ ಮತ್ತು ಅಹ್ಮದಾಬಾದ್ ಹೈಕೋರ್ಟ್ ನ ನಿರ್ದಿಷ್ಟ ಪ್ರಕರಣಗಳನ್ನು ನಾವು ಸ್ವಯಂ ಕೈಗೆತ್ತಿಕೊಳ್ಳಲಿದ್ದೇವೆ" ಎಂದು ಸುಪ್ರೀಂ ಕೋರ್ಟ್ ಹೇಳಿಕೆ ನೀಡಿದೆ.