ಆಮ್ಲಜನಕದ ಅಬಾಧಿತ ಉತ್ಪಾದನೆ, ಪೂರೈಕೆಗಾಗಿ ವಿಪತ್ತು ನಿರ್ವಹಣಾ ಕಾಯಿದೆಯನ್ವಯ ಆದೇಶ ಹೊರಡಿಸಿದ ಕೇಂದ್ರ ಗೃಹ ಸಚಿವಾಲಯ
ಹೊಸದಿಲ್ಲಿ : ಅಂತರ-ರಾಜ್ಯ ಗಡಿಗಳಲ್ಲಿ ವೈದ್ಯಕೀಯ ಆಮ್ಲಜನಕ ಪೂರೈಕೆ ವಾಹನಗಳ ಅನಿರ್ಬಂಧಿತ ಸಾಗಾಟಕ್ಕೆ ಹಾಗೂ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಮತ್ತು ಪೂರೈಕೆಯನ್ನು ಅಬಾಧಿತಗೊಳಿಸುವಂತೆ ರಾಜ್ಯಗಳಿಗೆ ಕೇಂದ್ರ ಸರಕಾರ ಗುರುವಾರ ನಿರ್ದೇಶನ ನೀಡಿದೆ. ಈ ಆದೇಶದ ಉಲ್ಲಂಘನೆಯಾದಲ್ಲಿ ಆಯಾಯ ಜಿಲ್ಲಾ ಮ್ಯಾಜಿಸ್ಟ್ರೇಟರುಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆಯಾಗಿಸಲಾಗುವುದು ಎಂದು ಸರಕಾರ ಹೇಳಿದ್ದು ಈ ಆದೇಶವನ್ನು ವಿಪತ್ತು ನಿರ್ವಹಣಾ ಕಾಯಿದೆ 2005 ಅನ್ವಯ ಕೇಂದ್ರ ಗೃಹ ಸಚಿವಾಲಯ ನೀಡಿದೆ.
ಕೆಲ ರಾಜ್ಯಗಳು ಇತರ ರಾಜ್ಯಗಳಿಗೆ ಆಕ್ಸಿಜನ್ ಸಾಗಾಟ ಮಾಡುವ ವಾಹನಗಳಿಗೆ ಅಡ್ಡಿಯುಂಟು ಮಾಡಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಇಂದಿನ ಆದೇಶವನ್ನು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ನೀಡಿದ್ದಾರೆ.
ಕೋವಿಡ್ ನಿರ್ವಹಣೆಗಾಗಿ ಆಕ್ಸಿಜನ್ ಪೂರೈಕೆ ಅಬಾಧಿತವಾಗಿರಬೇಕಿರುವುದರಿಂದ ಈ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆಕ್ಸಿಜನ್ ತಯಾರಕರು ಹಾಗೂ ಪೂರೈಕೆದಾರರಿಗೆ ಆಯಾಯ ರಾಜ್ಯಗಳ ಆಸ್ಪತ್ರೆಗಳಿಗೇ ಪೂರೈಕೆ ಮಾಡಬೇಕೆಂಬ ನಿಬಂಧನೆಯನ್ನು ವಿಧಿಸಲು ಕೂಡ ಸಾಧ್ಯವಿಲ್ಲ ಎಂದು ಕೇಂದ್ರದ ಸೂಚನೆ ತಿಳಿಸಿದೆ. ಆಕ್ಸಿಜನ್ ಪೂರೈಕೆ ವಾಹನಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಯಾವುದೇ ಪ್ರದೇಶದ ಪ್ರಾಧಿಕಾರಗಳಿಗೂ ಇರುವುದಿಲ್ಲ ಎಂದು ಕೇಂದ್ರ ಹೇಳಿದೆ.