"ಅಗ್ನಿ ಅನಾಹುತ ಸಂಭವಿಸಿದಾಗ ಆಸ್ಪತ್ರೆ ಸಿಬ್ಬಂದಿ ನಿದ್ದೆಯಲ್ಲಿದ್ದರು, ರೋಗಿಗಳ ಸ್ಥಳಾಂತರಕ್ಕೆ ಯಾರೂ ಸಹಾಯ ಮಾಡಿಲ್ಲ"
ಮೃತರ ಕುಟುಂಬ ಸದಸ್ಯರ ಆರೋಪ
ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ನಗರದಲ್ಲಿರುವ ನಾಲ್ಕು ಅಂತಸ್ತಿನ ವಿಜಯ ವಲ್ಲಭ ಆಸ್ಪತ್ರೆಯ ಎರಡನೇ ಅಂತಸ್ತಿನಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಾಗ ಅಲ್ಲಿನ ಸಿಬ್ಬಂದಿ ನಿದ್ದೆಯಲ್ಲಿದ್ದರು ಹಾಗೂ ರೋಗಿಗಳನ್ನು ಐಸಿಯುವಿನಿಂದ ಹೊರಕ್ಕೆ ತರಲು ಯಾರೂ ಸಹಾಯ ಮಾಡಿಲ್ಲ ಎಂದು ದುರಂತದಲ್ಲಿ ಮಡಿದವರ ಸಂಬಂಧಿಕರು ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿ ಸೂಕ್ತ ಅಗ್ನಿಶಾಮಕ ವ್ಯವಸ್ಥೆಯೂ ಇರಲಿಲ್ಲ ಎಂದು ದೂರಲಾಗಿದೆ.
ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 13 ಮಂದಿ ರೋಗಿಗಳು ಮೃತಪಟ್ಟಿದ್ದಾರೆ.
"ಘಟನೆಗೆ ಆಸ್ಪತ್ರೆಯ ಆಡಳಿತವೇ ಕಾರಣ. ರೋಗಿಗಳಿಗೆ ದುರಂತದ ಸಮಯ ಹೊರಬರಲು ಸಹಾಯ ಮಾಡಲು ಒಬ್ಬನೇ ಒಬ್ಬ ಸಿಬ್ಬಂದಿ ಇರಲಿಲ್ಲ" ಎಂದು ಹಲವರು ದೂರಿದ್ದಾರೆ.
ಈ ದುರಂತದಲ್ಲಿ ತಮ್ಮ ತಾಯಿಯನ್ನು ಕಳೆದುಕೊಂಡ ವೈದ್ಯೆಯೊಬ್ಬರು ಪ್ರತಿಕ್ರಿಯಿಸಿ ಅಗ್ನಿಶಾಮಕ ವ್ಯವಸ್ಥೆಯಿದ್ದಲ್ಲಿ ತಕ್ಷಣ ಬೆಂಕಿ ನಂದಿಸಬಹುದಾಗಿತ್ತು ಎಂದು ಹೇಳಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಿ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದೂ ಹಲವರು ಆಗ್ರಹಿಸಿದ್ದಾರೆ.