"ಆಕ್ಸಿಜನ್ ಕೊರತೆಯಿಂದಾಗಿ ʼಅತೀದೊಡ್ಡ ದುರಂತʼ ಸಂಭವಿಸುವ ಸಾಧ್ಯತೆಯಿದೆ"
ಪ್ರಧಾನಿಯೊಂದಿಗಿನ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ ಕೇಜ್ರಿವಾಲ್
ಹೊಸದಿಲ್ಲಿ: ಕೋವಿಡ್ ಎರಡನೇ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ದೊಡ್ಡ ದುರಂತವೇ ಸಂಭವಿಸಬಹುದೆಂದು ಹೇಳಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರಕಾರ ಎಲ್ಲಾ ಆಕ್ಸಿಜನ್ ಸ್ಥಾವರಗಳನ್ನು ಸೇನೆಯ ಮುಖಾಂತರ ತನ್ನ ವಶಕ್ಕೆ ಪಡೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೋವಿಡ್-19 ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವರ್ಚುವಲ್ ಸಂವಾದದ ವೇಳೆ ಮಾತನಾಡಿದ ಕೇಜ್ರಿವಾಲ್, ರಾಜಧಾನಿಗೆ ಬರುವ ಎಲ್ಲಾ ಆಕ್ಸಿಜನ್ ಟ್ಯಾಂಕರ್ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸುವಂತೆ ಪ್ರಧಾನಿಯಲ್ಲಿ ಮನವಿ ಮಾಡಿದರು.
"ಆಕ್ಸಿಜನ್ ಕೊರತೆಯಿಂದ ಜನರು ಸಮಸ್ಯೆಯಲ್ಲಿದ್ದಾರೆ. ಇದರಿಂದಾಗಿ ದೊಡ್ಡ ದುರಂತವೇ ಸಂಭವಿಸಬಹುದೆಂಬ ಭಯ ನಮಗಿದೆ ಹಾಗೂ ನಾವು ನಮ್ಮನ್ನು ಕ್ಷಮಿಸಲು ಸಾಧ್ಯವೇ ಇಲ್ಲವಾಗಬಹುದು. ದಿಲ್ಲಿಗೆ ಬರುವ ಎಲ್ಲಾ ಆಕ್ಸಿಜನ್ ಟ್ಯಾಂಕರ್ಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಸಿಎಂಗಳಿಗೆ ಸೂಚಿಸುವಂತೆ ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ" ಎಂದು ಕೇಜ್ರಿವಾಲ್ ಹೇಳಿದರು.
"ಸಮಸ್ಯೆ ಪರಿಹಾರಕ್ಕೆ ರಾಷ್ಟ್ರ ಮಟ್ಟದ ಯೋಜನೆಯ ಅಗತ್ಯವಿದೆ. ಸೇನೆಯ ಮುಖಾಂತರ ಎಲ್ಲಾ ಆಕ್ಸಿಜನ್ ಸ್ಥಾವರಗಳನ್ನು ಕೇಂದ್ರ ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಸ್ಥಾವರದಿಂದ ಹೊರಡುವ ಪ್ರತಿಯೊಂದು ಟ್ಯಾಂಕರ್ಗೆ ಸೇನೆಯ ಬೆಂಗಾವಲು ವಾಹನ ಒದಗಿಸಬೇಕು" ಎಂದು ಅವರು ಹೇಳಿದರು.
"ದಿಲ್ಲಿಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಿಂದ ಬರಲಿರುವ ಆಕ್ಸಿಜನ್ ಅನ್ನು ಏರ್ ಲಿಫ್ಟ್ ಮಾಡಬೇಕು ಇಲ್ಲದೇ ಇದ್ದಲ್ಲಿ ಕೇಂದ್ರ ಆರಂಭಿಸಿದ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಕಳುಹಿಸಿಕೊಡಬೇಕು" ಎಂದೂ ಅವರು ಆಗ್ರಹಿಸಿದರು.