ವಕೀಲ, ಕುಟುಂಬಸ್ಥರಿಗೆ ತಿಳಿಸದೆ ಸಿದ್ದೀಕ್ ಕಪ್ಪನ್ ರನ್ನು ಆಸ್ಪತ್ರೆಯಿಂದ ಜೈಲಿಗೆ ಸ್ಥಳಾಂತರ: ಆರೋಪ
ಹೊಸದಿಲ್ಲಿ: ಬಂಧನಕ್ಕೊಳಗಾಗಿರುವ ಪತ್ರಕರ್ತ ಸಿದ್ದೀಕ್ ಕಪ್ಪನ್ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆದರೆ ಕುಟುಂಬಸ್ಥರೊಂದಿಗೆ ಮತ್ತು ವಕೀಲರಿಗೆ ಯಾವುದೇ ಮಾಹಿತಿ ನೀಡಿದೇ ಮತ್ತು ಅವರಿಗೆ ಮಾತನಾಡಲು ಪೊಲೀಸರು ಅವಕಾಶ ನೀಡದೇ ಉತ್ತರಪ್ರದೇಶದ ಮಥುರಾ ಜೈಲಿಗೆ ಕರೆದೊಯ್ದಿದ್ದಾಗಿ ಸಿದ್ದೀಕ್ ಪತ್ನಿ ರೈಹಾನತ್ newslaundryಗೆ ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ 2:30ರ ವೇಳೆ ಅವರು ಮಥುರಾ ಜೈಲಿಗೆ ತಲುಪಿದ್ದಾರೆ ಎಂದು ಜೈಲು ಸುಪರಿಂಟೆಂಡೆಂಟ್ ಶೈಲೇಂದ್ರ ಕುಮಾರ್ ಮೈತ್ರೇಯ ಹೇಳಿಕೆ ನೀಡಿದ್ದಾರೆ. ಅವರು ಇನ್ನೂ ಕೋವಿಡ್ ನೆಗೆಟಿವ್ ಆಗದಿರುವ ಕಾರಣ ಅವರನ್ನು ಐಸೋಲೇಶನ್ ನಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
"ಅವರ ಕುಟುಂಬಸ್ಥರಾಗಲಿ, ಅವರ ವಕೀಲರಿಗಾಗಲಿ ಅವರನ್ನು ಆಸ್ಪತ್ರೆಯಿಂದ ಜೈಲಿಗೆ ವರ್ಗಾಯಿಸುವುದರ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಕಪ್ಪನ್ ಪರ ವಕೀಲ ವಿಲ್ಸ್ ಮ್ಯಾಥ್ಯೂಸ್ ಹೇಳಿದ್ದಾರೆ.
"ಕಾನೂನು ಪ್ರಕಾರ, ಕುಟುಂಬಕ್ಕೆ ಮತ್ತು ವಕೀಲರಿಗೆ ಮಾಹಿತಿ ನೀಡುವುದು ಪೊಲೀಸರ ಕರ್ತವ್ಯವಾಗಿರುತ್ತದೆ. ನಾನು ಪೊಲೀಸರೊಂದಿಗೆ ಈ ಕುರಿತು ವಿಚಾರಿಸಿದಾಗ ನಮಗೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದೆಲ್ಲವೂ ರಹಸ್ಯವಾಗಿ ನಡೆಯುತ್ತಿದೆ. ಕೇವಲ ರಹಸ್ಯವಾಗಿ ಮಾತ್ರವಲ್ಲ ಅನ್ಯಾಯ ಮತ್ತು ಅನೈತಿಕ ಹಾದಿಯಲ್ಲಿ ಇದು ನಡೆಯುತ್ತಿದೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೂ ವಿರುದ್ಧವಾಗಿದೆ" ಎಂದು ವಕೀಲ ವಿಲ್ಸ್ ಮಾಥ್ಯೂ ಹೇಳಿದ್ದಾರೆ.
"ಆರೋಪಿಗಳು ದಿನವೂ ತಮ್ಮ ಕುಟುಂಬದೊಂದಿಗೆ ಮಾತನಾಡಲು ನಾವು ಅವಕಾಶ ಮಾಡಿಕೊಡುತ್ತೇವೆ. ಅದಕ್ಕಿಂತ ಉತ್ತಮವಾದದ್ದು ಏನು ಮಾಡಲು ಸಾಧ್ಯ? ಆನು ಕೋರ್ಟ್ ಗೆ ಉತ್ತರ ಹೇಳಬೇಕಾಗುತ್ತದೆ. ಎಲ್ಲಾ ಆರೋಪಿಗಳ ಕುಟುಂಬಕ್ಕೆ ಕಾಲ್ ಮಾಡಿಸುವುದು ನನ್ನ ಕೆಲಸವಲ್ಲ ಎಂದು ಜೈಲ್ ಸುಪರಿಂಟೆಂಡೆಂಟ್ ಹೇಳಿದ್ದಾಗಿ thequint ವರದಿ ಮಾಡಿದೆ.