ಕೋವಿಡ್ ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ: ಅರವಿಂದ್ ಕೇಜ್ರಿವಾಲ್
ಬಡ ಕುಟುಂಬಗಳ 72 ಲಕ್ಷ ಜನರಿಗೆ 10 ಕೆಜಿ ಉಚಿತ ಪಡಿತರ
ಹೊಸದಿಲ್ಲಿ: ಕೋವಿಡ್ -19 ಕಾರಣದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು 25 ವರ್ಷಕ್ಕೆ ಕಾಲಿಡುವ ತನಕ ತಿಂಗಳಿಗೆ 2,500 ರೂ. ಪಡೆಯಲಿದ್ದಾರೆ. ಹಾಗೂ ಅವರ ಶಿಕ್ಷಣದ ಖರ್ಚು-ವೆಚ್ಚವನ್ನು ದಿಲ್ಲಿ ಸರಕಾರವು ಪಾವತಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.
ಬಡತನ ಮತ್ತು ವಿಪತ್ತು ಪೀಡಿತ ಕುಟುಂಬಗಳಿಗೆ ಕೇಜ್ರಿವಾಲ್ ಅವರು ಸರಣಿ ಕ್ರಮಗಳನ್ನು ಪ್ರಕಟಿಸಿದರು.
ಬಡ ಕುಟುಂಬಗಳ 72 ಲಕ್ಷ ಜನರಿಗೆ ಈ ತಿಂಗಳು 10 ಕೆಜಿ ಉಚಿತ ಪಡಿತರ ಸಿಗಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ;
ಇದರಲ್ಲಿ ಅರ್ಧದಷ್ಟು ಭಾಗವನ್ನು ಆಡಳಿತಾರೂಢ ಎಎಪಿ ಸರಕಾರ ಹಾಗೂ ಉಳಿದವುಗಳನ್ನು ಕೇಂದ್ರ ಯೋಜನೆಯಿಂದ ಒದಗಿಸಲಾಗುವುದು.
"ಪ್ರತಿ ತಿಂಗಳು 5 ಕೆಜಿ ಪಡಿತರವನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಆದರೆ ಈ ತಿಂಗಳು ಅವರು (ಬಡ ಕುಟುಂಬಗಳು) ಅದನ್ನು ಉಚಿತವಾಗಿ ಪಡೆಯುತ್ತಾರೆ. ಇದಕ್ಕಿಂತ ಹೆಚ್ಚಾಗಿ 5 ಕೆಜಿ ಪಡಿತರಗಳನ್ನು ಪ್ರಧಾನ ಮಂತ್ರಿಗಳ ಯೋಜನೆಯಡಿ ನೀಡಲಾಗುತ್ತಿದೆ ... ಆದ್ದರಿಂದ ಒಟ್ಟು 10 ಕೆಜಿ ಪಡಿತರ ಈ ಬಾರಿ ಉಚಿತವಾಗಿ ನೀಡಲಾಗುವುದು "ಎಂದು ಕೇಜ್ರಿವಾಲ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.