ಜಾಮೀನಿನ ಮೇಲೆ ಹೊರಬಂದ ವ್ಯಕ್ತಿಯಿಂದ ಪ್ರಧಾನಿ ಮೋದಿಗೆ ಜೀವ ಬೆದರಿಕೆ
ಜೈಲಿಗೆ ಮರಳಲು ಈ ಕೃತ್ಯವೆಸಗಿದ್ದೇನೆಂದ ಆರೋಪಿ
ಹೊಸದಿಲ್ಲಿ: ದೂರವಾಣಿ ಕರೆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ 22 ರ ವಯಸ್ಸಿನ ಯುವಕನನ್ನು ದಿಲ್ಲಿಯ ಖಜುರಿ ಖಾಸ್ನಲ್ಲಿ ಬಂಧಿಸಲಾಗಿದೆ. ಈ ಯುವಕ ಜಾಮೀನಿನ ಮೇಲೆ ಹೊರಬಂದಿದ್ದ. ಈಗ ಮತ್ತೆ ಜೈಲಿಗೆ ಹೋಗುವ ಉದ್ದೇಶದಿಂದಲೇ ಪ್ರಧಾನಿಗೆ ಜೀವ ಬೆದರಿಕೆ ಹಾಕಿದ್ದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸಲ್ಮಾನ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ನಿನ್ನೆ ರಾತ್ರಿ ಪೊಲೀಸರಿಗೆ ಬೆದರಿಕೆ ಕರೆ ಮಾಡಿ, "ನಾನು ಮೋದಿಯನ್ನು (ಪಿಎಂ ಮೋದಿ) ಕೊಲ್ಲಲು ಬಯಸುತ್ತೇನೆ" ಎಂದು ಹೇಳಿದ್ದ.
ಕರೆ ಮಾಡಿದ ನಂತರ ಪೊಲೀಸರು ಈಶಾನ್ಯ ದಿಲ್ಲಿಯ ಖಜುರಿ ಖಾಸ್ ಪ್ರದೇಶದಿಂದ ಯುವಕನನ್ನು ಬಂಧಿಸಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದರು. ವಿಚಾರಣೆ ವೇಳೆ, ತಾನು ಮತ್ತೆ ಜೈಲಿಗೆ ಹೋಗಲು ಇಚ್ಛಿಸಿದ್ದರಿಂದ ಬೆದರಿಕೆ ಕರೆ ಮಾಡಿದ್ದಾಗಿ ಆ ವ್ಯಕ್ತಿ ಹೇಳಿದ್ದಾನೆ ಎನ್ನಲಾಗಿದೆ.
ಸಲ್ಮಾನ್ ವಿರುದ್ಧ ಹಲವಾರು ಪ್ರಕರಣಗಳಿವೆ ಹಾಗೂ ಆತ ಜಾಮೀನಿನ ಮೇಲೆ ಹೊರಬಂದಿದ್ದಾನೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಸಲ್ಮಾನ್ ಮತ್ತೆ ಜೈಲಿಗೆ ಹೋಗಲು ಬಯಸಿದ್ದರಿಂದ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಎಂದು ವರದಿಯಾಗಿದೆ.
ಈ ವಿಷಯ ಪಿಎಂ ನರೇಂದ್ರ ಮೋದಿಗೆ ಸಂಬಂಧಿಸಿರುವುದರಿಂದ ಗುಪ್ತಚರ ಅಧಿಕಾರಿಗಳೂ ಸಲ್ಮಾನ್ ನನ್ನು ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು India today ವರದಿ ಮಾಡಿದೆ.