ದೇಶದಲ್ಲಿ ಲಸಿಕೆ ಕೊರತೆ ಕುರಿತು ಕಳವಳ ವ್ಯಕ್ತಪಡಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡುವುದು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಉತ್ತಮ ಮಾರ್ಗ ಎಂದು ಕೇಂದ್ರ ಸರಕಾರ ಹೇಳುತ್ತಿದ್ದರೂ ಕೋವಿಡ್ -19 ರ ಎರಡನೇ ಅಲೆಯ ಸಂದರ್ಭ ಲಸಿಕೆ ಕೊರತೆ ಎಲ್ಲರನ್ನೂ ಬಾಧಿಸುತ್ತಿದೆ ಎಂದು ದಿಲ್ಲಿ ಹೈಕೋರ್ಟ್ ಇಂದು ಕಳವಳ ವ್ಯಕ್ತಪಡಿಸಿದೆ.
ರಷ್ಯಾದ ನೇರ ಹೂಡಿಕೆ ನಿಧಿ (ಆರ್ಡಿಐಎಫ್) ಸಹಯೋಗದೊಂದಿಗೆ ಭಾರತದ ಪ್ಯಾನೇಸಿಯಾ ಬಯೋಟೆಕ್ ಕೋವಿಡ್ -19 ಲಸಿಕೆ ಸ್ಪುಟ್ನಿಕ್ ವಿ ತಯಾರಿಕೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿತು.
ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲು ಆರ್ಬಿಟಲ್ ಮೊತ್ತವಾದ 14 ಕೋಟಿ ರೂ.ವನ್ನು 2012ರಿಂದ ಈ ವರೆಗಿನ ಬಡ್ಡಿ ಸೇರಿಸಿ ಪ್ಯಾನೇಶಿಯಾ ಬಯೋಟೆಕ್ ಗೆ ನೀಡಬೇಕು. ಇದು ಲಸಿಕೆ ತಯಾರಿಸಲು ಕಂಪೆನಿಯು ಸರಕಾರದಿಂದ ಅನುಮತಿ ಪಡೆಯುತ್ತದೆ ಎಂಬ ಷರತ್ತಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ನಜ್ಮಿ ವಾಝಿರಿ ಅವರಿದ್ದ ನ್ಯಾಯಪೀಠವು ಕೇಂದ್ರಕ್ಕೆ ನಿರ್ದೇಶನ ನೀಡಿತು.
"ಇಂದು, ಕೊರೋನ 2ನೇ ಅಲೆಯ ಸಮಯದಲ್ಲಿ ಈ ವಿಚಾರ ತೆಗೆದುಕೊಂಡ ಬಗ್ಗೆ ನಾವು ಸ್ವಲ್ಪ ದುಃಖಿತರಾಗಿದ್ದೇವೆ. ಜವಾಬ್ದಾರಿ ಯುತ ಪ್ರಜೆಯಾಗಿ ನೀವೂ ಸಹ ದುಃಖಿತರಾಗುತ್ತೀರಿ. ಲಸಿಕೆ ಕೊರತೆ ಪ್ರತಿಯೊಬ್ಬರಿಗೂ ಬಾಧಿಸುತ್ತಿದೆ. ಇಂದಿಗೂ ದಿಲ್ಲಿಯಲ್ಲಿ ಲಸಿಕೆ ಲಭ್ಯವಿಲ್ಲ"ಎಂದು ನ್ಯಾಯಪೀಠ ಹೇಳಿದೆ.
"ರಷ್ಯಾದಿಂದ ಯಾರಾದರೂ ಹಿಮಾಚಲ ಪ್ರದೇಶದಲ್ಲಿ ಮೂಲಸೌಕರ್ಯಗಳನ್ನು ಕಂಡುಕೊಳ್ಳಲು ಸಮರ್ಥರಾಗಿದ್ದಾರೆ. ಆದರೆ ಕೇಂದ್ರವು ಅದನ್ನು ಮಾಡಲು ವಿಫಲವಾಗಿದೆ" ಎಂದು ನ್ಯಾಯಾಲಯ ಹೇಳಿದೆ.