ಸುಪ್ರೀಂ ಕೋರ್ಟ್ನ ಕಠಿಣ ಪ್ರಶ್ನೆಗಳ ಬಳಿಕ ಕೋವಿಡ್ ಲಸಿಕೆ ನೀತಿಯನ್ನು ಬದಲಾಯಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ಸುಪ್ರೀಂಕೋರ್ಟ್ನಿಂದ ಕೆಲವು ಕಠಿಣ ಪ್ರಶ್ನೆಗಳನ್ನು ಎದುರಿಸಿದ ಒಂದು ವಾರದ ನಂತರ ಕೇಂದ್ರ ಸರಕಾರವು ಕೋವಿಡ್ ವ್ಯಾಕ್ಸಿನೇಷನ್ ನೀತಿಯಲ್ಲಿ ಬದಲಾವಣೆಯನ್ನು ಘೋಷಿಸಿದೆ.
ಮೂರು ಸದಸ್ಯರ ಸುಪ್ರೀಂಕೋರ್ಟ್ ಪೀಠವು ಮೇ 31 ರಂದು ಲಸಿಕೆ ಅಭಿಯಾನದಲ್ಲಿ ವಿವಿಧ ನ್ಯೂನತೆಗಳನ್ನು ಪಟ್ಟಿ ಮಾಡಿತ್ತು, ವಿವಿಧ ರೀತಿಯ ಬೆಲೆ ನಿಗದಿ, ಡೋಸೇಜ್ ಗಳ ಕೊರತೆ ಹಾಗೂ ಗ್ರಾಮೀಣ ಭಾರತದಲ್ಲಿ ಲಸಿಕೆಗಳ ಕೊರತೆಯಂತಹ ಅಂಶಗಳನ್ನು ಟೀಕಿಸಿತ್ತು.
ಸೋಮವಾರ ರಾಷ್ಟ್ರೀಯ ಭಾಷಣದಲ್ಲಿ ಪ್ರಧಾನಿ ಮೋದಿ ತಮ್ಮ ಸರಕಾರವು ಜೂನ್ 21 ರಿಂದ ದೇಶದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು. ಈ ಮೂಲಕ ರಾಜ್ಯಗಳ ಹೊರೆಯನ್ನು ತಗ್ಗಿಸಿದ್ದರು.
ಮೇ 31 ರಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್.ಎನ್. ರಾವ್ ಹಾಗೂ ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ಕೇಂದ್ರ ಸರಕಾರದ ಲಸಿಕೆ ನೀತಿಯನ್ನು ತೀವ್ರವಾಗಿ ಟೀಕಿಸಿತ್ತು. ಕೇಂದ್ರ ಸರಕಾರದ ಲಸಿಕೆ ನೀತಿಯನ್ನು ನಿರಂಕುಶ ಹಾಗೂ ತರ್ಕಹೀನ ಎಂದು ಕಟುವಾಗಿ ಟೀಕಿಸಿತ್ತು. ಹೊಸ ಲಸಿಕೆ ನೀತಿಯನ್ನು ಮರುಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು.