ಕಣ್ಣೂರು: ಮೂತ್ರ ಮಾಡಿರುವುದಕ್ಕೆ 1 ವರ್ಷದ ಮಗುವನ್ನು ಥಳಿಸಿ ಗಾಯಗೊಳಿಸಿದ ಮಲ ತಂದೆ
ಕಣ್ಣೂರು, ಜೂ. 13: ಒಂದು ವರ್ಷದ ಹೆಣ್ಣು ಮಗು ಮೂತ್ರ ಮಾಡಿರುವುದಕ್ಕೆ ಅಸಮಾಧಾನಗೊಂಡ ಮಲ ತಂದೆ ಮಗುವಿಗೆ ಕ್ರೂರವಾಗಿ ಥಳಿಸಿ ಗಾಯಗೊಳಿಸಿದ ಅಮಾನವೀಯ ಘಟನೆ ಕಣ್ಣೂರಿನ ಕೇಲಕಂನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿ ಪುತ್ತೇನ್ವೀಟಿಲ್ ರತೀಶ್(39) ಹಾಗೂ ಚೆಂಗೋಮ್ ನ ವಿಟ್ಟಯಾರ್ ರಮ್ಯಾ (24) ಅವರನ್ನು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ತನ್ನ ಪತಿಯ ಥಳಿತದಿಂದ ಪುತ್ರಿಯನ್ನು ರಕ್ಷಿಸಲು ವಿಫಲವಾದ ರಮ್ಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕಣ್ಣೂರು ಕೇಳಕಂ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಮಗು ಮೂತ್ರ ಮಾಡಿದ ಹಿನ್ನೆಲೆಯಲ್ಲಿ ರತೀಶ್ ಮಗುವನ್ನು ಮನಬಂದಂತೆ ಕಟ್ಟಿಗೆಯ ತುಂಡಿನಿಂದ ಥಳಿಸಿದ್ದಾನೆ. ರಮ್ಯಾ ಅವರ ಹೆತ್ತವರು ಮಗುವನ್ನು ಅಸೌಖ್ಯದ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದ ಸಂದರ್ಭ ಇದು ಬೆಳಕಿಗೆ ಬಂದಿದೆ.
ಮಗುವಿನ ಮುಖ ಹಾಗೂ ತಲೆಯ ಗಾಯವನ್ನು ಗಮನಿಸಿದ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವನ್ನು ಅನಂತರ ಕಣ್ಣೂರಿನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದೆ. ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಘಟನೆ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಕೇರಳ ಮಾನವ ಹಕ್ಕು ಆಯೋಗದ ಅಧ್ಯಕ್ಷ ಕೆ.ವಿ. ಮನೋಜ್ ಕುಮಾರ್ ಆದೇಶ ನೀಡಿದ್ದಾರೆ.