ಗರ್ಭಿಣಿ ಮಹಿಳೆ ಕೋವಿಡ್ -19ಗೆ ಬಲಿಯಾಗುವ ಕೆಲವೇ ಸೆಕೆಂಡ್ ಮೊದಲು ಮಗುವಿನ ಜೀವ ಉಳಿಸಿದ ವೈದ್ಯರು
ಹೊಸದಿಲ್ಲಿ: ಗರ್ಭಿಣಿ ಮಹಿಳೆ ಯೊಬ್ಬರು ಕೋವಿಡ್ -19 ಗೆ ಬಲಿಯಾಗುವ ಕೆಲವೇ ಸೆಕೆಂಡ್ ಗಳ ಮೊದಲು ಆಂಧ್ರಪ್ರದೇಶದ ವೈದ್ಯರ ತಂಡ ಮಗುವಿನ ಜೀವ ಉಳಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದೆ.
ಆಂಧ್ರದ ಕಿಂಗ್ ಜಾರ್ಜ್ ಆಸ್ಪತ್ರೆಯ ವೈದ್ಯರುಗಳು ಗರ್ಭಿಣಿ ಮಹಿಳೆಯೊಬ್ಬರು ಹೆರಿಗೆಯ ಸಮಯದಲ್ಲಿ ಕೋವಿಡ್ -19 ಸಂಬಂಧಿಸಿದ ಸಮಸ್ಯೆಗೆ ಬಲಿಯಾಗುವ ಕೆಲವೇ ಸೆಕೆಂಡುಗಳ ಮೊದಲು ಮಗುವನ್ನು ಉಳಿಸುವಲ್ಲಿ ಯಶಸ್ವಿಯಾದರು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಎ.ಕೆ.ಕೃಷ್ಣ ಶ್ರೀನಿವಾಸ್ ಅವರು ಶನಿವಾರ ವೆಂಟಿಲೇಟರ್ನಲ್ಲಿದ್ದ ಹಾಗೂ ಕೋವಿಡ್ -19 ಸಂಬಂಧಿತ ತೊಡಕುಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೇಲೆ ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ಪ್ರಯತ್ನವನ್ನು ಶ್ಲಾಘಿಸಿದರು.
ಒಂಬತ್ತು ತಿಂಗಳ ಗರ್ಭಿಣಿ ಜಯಲಕ್ಷ್ಮಿ ಅವರನ್ನು ಜೂನ್ 2 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ವೆಂಟಿಲೇಟರ್ ಚಿಕಿತ್ಸೆಗಾಗಿ ಐಸಿಯುಗೆ ಸ್ಥಳಾಂತರಿಸಲಾಯಿತು.
"ಮಗು ಆರೋಗ್ಯವಾಗಿದೆ. ಆದರೆ ಮಗುವಿನ ತಾಯಿ ಜಯಲಕ್ಷ್ಮಿ ಕೋವಿಡ್ನಿಂದಾಗಿ ಶ್ವಾಸಕೋಶದ ತೀವ್ರ ಸೋಂಕಿನಿಂದ ಸಾವನ್ನಪ್ಪಿದ್ದಾರೆ" ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.