ಅಯೋಧ್ಯೆ ಭೂಹಗರಣ ಆರೋಪದ ತನಿಖೆಗೆ ಗೆಹ್ಲೋಟ್ ಆಗ್ರಹ
ಜೈಪುರ, ಜೂ.15: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಉದ್ದೇಶದಿಂದ ಜನರಿಂದ ಸಂಗ್ರಹಿಸಿರುವ ದೇಣಿಗೆಯ ಹಣ ದುರ್ಬಳಕೆಯಾಗಿರುವ ವರದಿಯು ಜನರ ವಿಶ್ವಾಸಕ್ಕೆ ಕೊಡಲಿಯೇಟು ನೀಡಿದೆ. ಈ ಬಗ್ಗೆ ಕೇಂದ್ರ ಸರಕಾರ ತನಿಖೆ ನಡೆಸಿ ತಪ್ಪಿತಸ್ಥ ರನ್ನು ಶಿಕ್ಷಿಸಬೇಕು ಎಂದು ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಗ್ರಹಿಸಿದ್ದಾರೆ.
ರಾಮ ಮಂದಿರಕ್ಕೆ ರಾಜಸ್ತಾನದ ಜನತೆ ಅತೀ ಹೆಚ್ಚಿನ ದೇಣಿಗೆ ನೀಡಿದ್ದಾರೆ. ಆದರೆ ಮಂದಿರ ನಿರ್ಮಾಣ ಕಾರ್ಯದ ಹೊಣೆ ಹೊತ್ತ ಟ್ರಸ್ಟ್ ದೇಣಿಗೆಯ ಹಣವನ್ನು ದುರ್ಬಳಕೆ ಮಾಡಿದೆ ಎಂಬ ವರದಿ ಜನಸಾಮಾನ್ಯರ ವಿಶ್ವಾಸಕ್ಕೇ ಧಕ್ಕೆ ತಂದಿದೆ. ಜಮೀನಿನ ಮೌಲ್ಯ 2 ಕೋಟಿ ರೂ. ಯಿಂದ ಒಂದು ನಿಮಿಷದಲ್ಲೇ 18 ಕೋಟಿ ರೂ.ಗೆ ಹೆಚ್ಚಿರುವುದನ್ನು ಯಾರೂ ನಂಬಲು ಸಾಧ್ಯವಿಲ್ಲ. ರಾಜಸ್ತಾನದ ಬನ್ಶಿಪಹಾರ್ಪುರದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಪಡೆದ ನಸುಗೆಂಪು ಬಣ್ಣದ ಕಲ್ಲನ್ನು ರಾಮಮಂದಿರ ಕಟ್ಟಲು ರವಾನಿಸಲಾಗಿದ್ದು ಇದಕ್ಕೆ ಕಾನೂನಿನ ಅನುಮತಿ ಪಡೆಯಲಾಗಿದೆ. ಆದರೆ ಪವಿತ್ರ ಕಾರ್ಯಕ್ಕೆ ಸಂಗ್ರಹಿಸಿದ ಹಣದಲ್ಲೂ ಹಗರಣ ನಡೆಯುತ್ತದೆ ಎಂದು ಯಾರೊಬ್ಬರೂ ಊಹಿಸಲೂ ಸಾಧ್ಯವಿಲ್ಲ ಎಂದವರು ಟ್ವೀಟ್ ಮಾಡಿದ್ದಾರೆ.