ಪಕ್ಷದ ಬಂಡಾಯ ಗುಂಪಿನ ವಿರುದ್ದ ಕಾನೂನು ಹೋರಾಟಕ್ಕೆ ಸಿದ್ಧ:ಚಿರಾಗ್ ಪಾಸ್ವಾನ್
ಹೊಸದಿಲ್ಲಿ: ತನ್ನ ಚಿಕ್ಕಪ್ಪನ ನೇತೃತ್ವದಲ್ಲಿ ಲೋಕ ಜನಶಕ್ತಿ ಪಕ್ಷದಲ್ಲಿ (ಎಲ್ಜೆಪಿ) ಬಂಡಾಯ ಭುಗಿಲೆದ್ದ ನಂತರ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವ ಚಿರಾಗ್ ಪಾಸ್ವಾನ್ ಅವರು ಇಂದು ಬಂಡಾಯ ಗುಂಪಿನ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧ ಎಂದು ಹೇಳಿದ್ದಾರೆ,
ನಾನು "ರಾಮ್ ವಿಲಾಸ್ ಪಾಸ್ವಾನ್ ಅವರ ಮಗ, ಸಿಂಹದ ಮರಿ " ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿರಾಗ್ ಹೇಳಿದರು.
ಬಿಹಾರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (ಎನ್ ಡಿಎ)ಪ್ರತ್ಯೇಕವಾಗಿ ಸ್ಪರ್ಧಿಸಿರುವ ತನ್ನ ನಿರ್ಧಾರವನ್ನು ಚಿರಾಗ್ ಸಮರ್ಥಿಸಿಕೊಂಡರು. ಇದು ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪರಾಸ್ ಅವರೊಂದಿಗಿನ ದ್ವೇಷಕ್ಕೆ ಕಾರಣವಾಗಿತ್ತು.
ಸೋಮವಾರ ಪಶುಪತಿ ಪರಾಸ್ ಹಾಗೂ ಇತರ ನಾಲ್ವರು ಸಂಸದರು ಚಿರಾಗ್ ಅವರಿಂದ ಬೇರ್ಪಟ್ಟಿದ್ದರು ಹಾಗೂ ತಮ್ಮನ್ನು ಪ್ರತ್ಯೇಕ ಗುಂಪು ಎಂದು ಗುರುತಿಸುವಂತೆ ಸ್ಪೀಕರ್ ಅವರನ್ನು ಕೇಳಿಕೊಂಡರು. ಲೋಕಸಭೆಯಲ್ಲಿ ಚಿರಾಗ್ ಸೇರಿದಂತೆ ಎಲ್ ಜೆಪಿಯ ಒಟ್ಟು 6 ಸಂಸದರಿದ್ದಾರೆ.