ಬಿಜೆಪಿಯಿಂದ ಟಿಎಂಸಿ ಸೇರಿದ ಮುಕುಲ್ ರಾಯ್ ಗೆ ನೀಡಿದ್ದ 'ಝಡ್ ಭದ್ರತೆʼಯನ್ನು ಹಿಂಪಡೆದ ಕೇಂದ್ರ ಗೃಹ ಇಲಾಖೆ
ಕೋಲ್ಕತ್ತ: ಇತ್ತೀಚೆಗೆ ಬಿಜೆಪಿ ತೊರೆದು ಟಿಎಂಸಿ ಪಕ್ಷ ಸೇರಿದ್ದ ಮುಕುಲ್ ರಾಯ್ ಗೆ ಈ ಹಿಂದೆ ನೀಡಿದ್ದ ಕೇಂದ್ರೀಯ ಭದ್ರತಾ ವ್ಯಾಪ್ತಿಯನ್ನು ಹಿಂಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಈ ಕುರಿತಾದಂತೆ ಸಿಆರ್ಪಿಎಫ್ ಅಧಿಕಾರಿಗಳು CNNಗೆ ಮಾಹಿತಿ ನೀಡಿದ್ದಾರೆ.
ಮುಕುಲ್ ರಾಯ್ ಗೆ ರಕ್ಷಣೆ ನೀಡುತ್ತಿದ್ದ ಭದ್ರತಾ ಸಿಬ್ಬಂದಿಗಳನ್ನು ಗುರುವಾರ ಬೆಳಗ್ಗೆ ಹಿಂತೆಗೆಯಲಾಗಿದೆ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಬೆದರಿಕೆಯಿದ್ದ ಕಾರಣ ದಾಳಿಯಾಗುವ ಸಾಧ್ಯತೆ ಇದೆ ಎಂದು ಅವರಿಗೆ ಚುನಾವಣೆಗೆ ಮುಂಚಿತವಾಗಿ ಝಡ್ ಭದ್ರತೆಯನ್ನು ನೀಡಲಾಗಿತ್ತು. ಸಶಸ್ತ್ರ ಬೆಂಗಾವಲು ಪಡೆ ಸೇರಿದಂತೆ 33 ಸಿಬ್ಬಂದಿಗಳನ್ನು ಅವರಿಗೆ ಒದಗಿಸಲಾಗಿತ್ತು.
ಮುಕುಲ್ ರಾಯ್ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾದ ಕೂಡಲೇ ತಮಗೆ ನೀಡಿದ್ದ ಝಡ್ ಭದ್ರತೆಯನ್ನು ಹಿಂಪಡೆದುಕೊಳ್ಳಬೇಕು ಎಂದು ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಈ ಹಿಂದೆ ಮುಕುಲ್ ರಾಯ್ ಪುತ್ರ ಸುಭ್ರಾಂಶು ರಾಯ್ ರ ಬೆಂಗಾವಲನ್ನೂ ಹಿಂಪಡೆದುಕೊಳ್ಳಲಾಗಿತ್ತು.
Next Story