ಉತ್ತರಪ್ರದೇಶ: ʼಎರಡು ಅಥವಾ ಕಡಿಮೆ ಮಕ್ಕಳಿರುವವರಿಗೆ ಮಾತ್ರ ಸರಕಾರಿ ಸೌಲಭ್ಯʼ ನೀತಿ ಜಾರಿಗೆ ಕರಡು ಮಸೂದೆ ಸಿದ್ಧ
ಲಕ್ನೋ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ದೇಶದ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಎರಡು ಮಕ್ಕಳ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಉತ್ತರಪ್ರದೇಶ ರಾಜ್ಯ ಕಾನೂನು ಆಯೋಗವು ಈ ನಿಟ್ಟಿನಲ್ಲಿ ಕಾನೂನು ಜಾರಿಗೆ ತರುವ ಉದ್ದೇಶದಿಂದ ಕರಡು ಮಸೂದೆಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದೆ. ಪ್ರಸ್ತಾವಿತ ಕಾನೂನಿನಂತೆ ಎರಡು ಅಥವಾ ಕಡಿಮೆ ಮಕ್ಕಳನ್ನು ಹೊಂದಿರುವವರಿಗೆ ಮಾತ್ರ ಸರಕಾರದ ಯೋಜನೆಗಳ ಪ್ರಯೋಜನ ದೊರಕುವಂತೆ ಮಾಡುವ ಯೋಜನೆಯಿದೆ ಎಂದು ವರದಿಗಳು ತಿಳಿಸಿವೆ.
ಈ ಪ್ರಸ್ತಾವಿತ ಕಾನೂನಿನ ಕುರಿತು ಉತ್ತರ ಪ್ರದೇಶ ಸರಕಾರ ಇನ್ನೂ ಏನನ್ನೂ ಹೇಳಿಲ್ಲದೇ ಇದ್ದರೂ ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಮಿತ್ತಲ್ ಈ ಕುರಿತು ಸುಳಿವು ನೀಡಿದ್ದಾರಲ್ಲದೆ ಕರಡು ಮಸೂದೆ ತಯಾರಿಸಲು ಆರಂಭಿಕ ಕೆಲಸ ಕಾರ್ಯಗಳು ಹಾಗೂ ಚರ್ಚೆಗಳು ನಡೆಯುತ್ತಿವೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.
ಸಂಬಂಧಿತರೆಲ್ಲರ ಜತೆ ಚರ್ಚೆ ನಡೆಸಿ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಕರಡು ಸಿದ್ಧಪಡಿಸಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದು ಎಂದು ಅವರು ಹೇಳಿದ್ದಾರೆ. ಉತ್ತರಪ್ರದೇಶದ ಜನಸಂಖ್ಯೆ 22 ಕೋಟಿಯಾಗಿದ್ದು ಇದು ಹಲವಾರು ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚಾಗಿರುವುದರಿಂದ ಇಂತಹ ಒಂದು ಕಾನೂನು ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಕೆಲ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಹಲವು ವಿಚಾರಗಳೊಂದಿಗೆ ಈ ಕರಡು ಮಸೂದೆ ಕೂಡ ಚರ್ಚೆಯಾಗಿದೆಯೆನ್ನಲಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಕೂಡ ಇತ್ತೀಚೆಗೆ ರಾಜ್ಯದಲ್ಲಿ ಎರಡು ಮಕ್ಕಳ ನೀತಿಯನ್ನು ಕ್ರಮೇಣವಾಗಿ ಜಾರಿಗೆ ತರಲಾಗುವುದು ಎಂದು ಹೇಳಿದ್ದರು.