ಸುಪ್ರೀಂಕೋರ್ಟ್ ತರಾಟೆ: 10,12ನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಿದ ಆಂಧ್ರಪ್ರದೇಶ
ಅಮರಾಪುರ: "ಒಂದು ಸಾವು ಸಂಭವಿಸಿದರೂ ಅದಕ್ಕೆ ರಾಜ್ಯವನ್ನು ಹೊಣೆಗಾರರನ್ನಾಗಿ ಮಾಡಲಾಗುವುದು'' ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳ ನಂತರ ಆಂಧ್ರಪ್ರದೇಶ ಸರಕಾರ 10 ಮತ್ತು 12 ನೇ ತರಗತಿ ಮಂಡಳಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಜುಲೈ 31 ರೊಳಗೆ ರಾಜ್ಯಕ್ಕೆ ಬೋರ್ಡ್ ಪರೀಕ್ಷೆಗಳನ್ನು ಆಯೋಜಿಸಲು ಹಾಗೂ ಫಲಿತಾಂಶಗಳನ್ನು ಘೋಷಿಸಲು ಸಾಧ್ಯವಿಲ್ಲ ಎಂದು ಆಂಧ್ರ ಪ್ರದೇಶದ ಶಿಕ್ಷಣ ಸಚಿವ ಸುರೇಶ್ ಹೇಳಿದ್ದಾರೆ.
ಒಂದು ವೇಳೆ ಸರಕಾರವು ತನ್ನ ಯೋಜನೆಯಂತೆ ಪರೀಕ್ಷೆಗಳನ್ನು ನಡೆಸುವುದಕ್ಕೆ ಮುಂದಾದರೆ ಪರೀಕ್ಷೆಯ ಸಮಯದಲ್ಲಿ ಕೋವಿಡ್ ಕಾರಣದಿಂದ ನಿಧನರಾಗುವ ಪ್ರತಿಯೊಬ್ಬರಿಗೂ 1 ಕೋಟಿ ರೂ. ಪರಿಹಾರಕ್ಕೆ ಆದೇಶಿಸಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
"ಒಂದು ಸಾವು ಸಂಭವಿಸಿದರೂ ನಾವು 1 ಕೋಟಿ ರೂ. ಪರಿಹಾರವನ್ನು ಆದೇಶಿಸಬಹುದು ... ಇತರ ಪರೀಕ್ಷಾ ಮಂಡಳಿಗಳು ಪರೀಕ್ಷೆ ರದ್ದುಪಡಿಸಿರುವಾಗ ಆಂಧ್ರಪ್ರದೇಶ ಏಕೆ ವಿಭಿನ್ನವಾಗಿದೆ ಎಂದು ತೋರಿಸಲು ಬಯಸುತ್ತದೆ?" ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರ ದ್ವಿ ಸದಸ್ಯ ಪೀಠ ಇಂದು ಬೆಳಿಗ್ಗೆ ಹೇಳಿದೆ.