ಗ್ರಾಚ್ಯುಯಿಟಿಗಾಗಿ ’ಕಲ್ಕಿ’ ಅವತಾರವೆತ್ತಿದ ಗುಜರಾತ್ ಮಾಜಿ ಸರ್ಕಾರಿ ಉದ್ಯೋಗಿ !
ಸಾಂದರ್ಭಿಕ ಚಿತ್ರ
ಅಹ್ಮದಾಬಾದ್ : ತಾನು ವಿಷ್ಣುವಿನ ಹತ್ತನೇ ಅವತಾರವಾಗಿರುವ ’ಕಲ್ಕಿ’ ಎಂದು ಹೇಳಿಕೊಂಡಿರುವ ಗುಜರಾತ್ನ ಮಾಜಿ ಸರ್ಕಾರಿ ನೌಕರನೊಬ್ಬ, ತನಗೆ ನೀಡಬೇಕಾಗಿರುವ ಗ್ರಾಚ್ಯುಯಿಟಿಯನ್ನು ತಕ್ಷಣ ನೀಡದಿದ್ದರೆ ನನ್ನ ’ದಿವ್ಯ ಶಕ್ತಿ’ಯಿಂದ ಇಡೀ ವಿಶ್ವದಲ್ಲಿ ಈ ವರ್ಷ ಕ್ಷಾಮ ಪರಿಸ್ಥಿತಿ ಸೃಷ್ಟಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಸುಧೀರ್ಘ ಗೈರುಹಾಜರಿಗಾಗಿ ಈತನಿಗೆ ಇತ್ತೀಚೆಗೆ ಅವಧಿಪೂರ್ವ ನಿವೃತ್ತಿ ಮಂಜೂರು ಮಾಡಲಾಗಿತ್ತು. ಜನಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗೆ ಜುಲೈ 1ರಂದು ಈ ಸಂಬಂಧ ಬರೆದ ಪತ್ರದಲ್ಲಿ "ಸರ್ಕಾರದಲ್ಲಿ ಕೂತಿರುವ ದೆವ್ವಗಳು" ತನ್ನ 16 ಲಕ್ಷ ರೂ. ಗ್ರಾಚ್ಯುಯಿಟಿ ಮತ್ತು ಒಂದು ವರ್ಷದ ವೇತನವಾದ ಹದಿನಾರು ಲಕ್ಷ ರೂ. ತಡೆ ಹಿಡಿಯುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದಾನೆ.
"ಈ ಕಿರುಕುಳಕ್ಕೆ ಪ್ರತಿಯಾಗಿ ಇಡೀ ಭೂಮಂಡಲಕ್ಕೆ ಭೀಕರ ಬರಗಾಲ ಉಂಟಾಗುವಂತೆ ಮಾಡುತ್ತೇನೆ. ನಾನು ವಿಷ್ಣುವಿನ ಹತ್ತನೇ ಅವತಾರ" ಎಂದು ಹೇಳಿದ್ದಾರೆ.
ರಾಜ್ಯ ಜಲಸಂಪನ್ಮೂಲ ಇಲಾಖೆಯ ಸರ್ದಾರ್ ಸರೋವರ ಪುನರ್ವಸತಿ ಯೋಜನೆಯ ಅಧೀಕ್ಷಕ ಎಂಜಿನಿಯರ್ ಎಂದು ಈ ವ್ಯಕ್ತಿ ಹೇಳಿಕೊಂಡಿದ್ದಾನೆ. ಎಂಟು ತಿಂಗಳಲ್ಲಿ ಕೇವಲ ಹದಿನಾರು ದಿನಗಳ ಕಾಲ ಕಚೇರಿಗೆ ಹಾಜರಾಗಿದ್ದ ಕಾರಣಕ್ಕೆ ಈತನಿಗೆ ಶೋಕಾಸ್ ನೋಟಿಸ್ ನಿಡಲಾಗಿತ್ತು.
"ಕಚೇರಿಗೆ ಹಾಜರಾಗದೇ ವೇತನ ಕೇಳುತ್ತಿದ್ದಾನೆ. ತಾನು ಕಲ್ಕಿಯಾಗಿದ್ದು, ಭೂಮಿಗೆ ಮಳೆ ತರಿಸುವ ಕೆಲಸ ಮಾಡುತ್ತಿದ್ದೆ ಎಂದು ಆತ ಪ್ರತಿಪಾದಿಸಿದ್ದಾನೆ" ಎಂದು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಎಂ.ಕೆ. ಜಾಧವ್ ಹೇಳಿದ್ದಾರೆ.