"ಉತ್ತರ ಪ್ರದೇಶದಲ್ಲಿ ಕಾನೂನಿನ ಬಹಿರಂಗ ಉಲ್ಲಂಘನೆ": ಬಹಿರಂಗ ಪತ್ರ ಬರೆದ 87 ಮಾಜಿ ಅಧಿಕಾರಿಗಳು
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಕಾನೂನಿನ ಬಹಿರಂಗ ಉಲ್ಲಂಘನೆಯಾಗುತ್ತಿದೆ ಹಾಗೂ ಆಡಳಿತ ಯಂತ್ರ ಹದಗೆಟ್ಟಿದೆ ಎಂದು ಆರೋಪಿಸಿ 87 ಮಂದಿ ಮಾಜಿ ಐಎಎಸ್ ಅಧಿಕಾರಿಗಳ ತಂಡವೊಂದು ಶುಕ್ರವಾರ ಬಹಿರಂಗ ಪತ್ರ ಬರೆದಿದೆ.
ಅಸಮ್ಮತಿಯನ್ನು ಮಟ್ಟ ಹಾಕಲು ಕ್ರಿಮಿನಲ್ ಪ್ರಕರಣಗಳ ದಾಖಲಿಕೆ, ರಾಜ್ಯದಲ್ಲಿ ಅಧಿಕಾರ ದುರ್ಬಳಕೆ ಮಾಡಿ ನಡೆಯುವ ಹತ್ಯೆಗಳು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹೇರಲಾಗಿರುವ ಮತಾಂತರ ನಿಗ್ರಹ ಕಾಯಿದೆ ಹಾಗೂ ಅಸಮರ್ಪಕ ಕೋವಿಡ್ ನಿರ್ವಹಣೆಯನ್ನು ಪತ್ರದಲ್ಲಿ ಪ್ರಶ್ನಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಆಡಳಿತದ ಎಲ್ಲಾ ಅಂಗಗಳು ಕುಸಿದಿವೆ, ಈಗಲೂ ಅಲ್ಲಿ ನಡೆಯುತ್ತಿರುವುದನ್ನು ನಿಯಂತ್ರಿಸದೇ ಇದ್ದಲ್ಲಿ ಮುಂದೆ ಪ್ರಜಾಪ್ರಭುತ್ವವೇ ನಾಶವಾಗಬಹುದು" ಎಂದು ಪತ್ರದಲ್ಲಿ ಬರೆಯಲಾಗಿದೆ.
ರಾಜ್ಯದಲ್ಲಿ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ಪ್ರತಿಭಟಿಸಿದವರ ಮೇಲೆ ಹೇಗೆ ಬಲಪ್ರಯೋಗ ನಡೆಸಲಾಗಿದೆ ಎಂಬುದನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿದೆಯೆಂಬುದನ್ನು ಅಲ್ಲಗಳೆದ ಆದಿತ್ಯನಾಥ್ ಸರಕಾರ ಅದೇ ಸಮಯ ಆಕ್ಸಿಜನ್ ಕೊರತೆಯಿದೆ ಎಂದು ಹೇಳುವವರನ್ನು ತಪ್ಪು ಮಾಹಿತಿ ಹರಡುವವರು ಎಂದು ಬಂಧಿಸಲಾಗುವುದು ಎಂದು ನೀಡಿದ ಎಚ್ಚರಿಕೆಯನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆಯಲ್ಲದೆ ಆಡಳಿತದಲ್ಲಿ ಇರುವ ಲೋಪಗಳನ್ನು ಎತ್ತಿ ತೋರಿಸಿದವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸುವಂತೆ ಕೋರಲಾಗಿದೆ.