ಕೋವಿಡ್ ಸಾವಿನ ಪ್ರಕರಣಗಳ ಸಂಖ್ಯೆಯನ್ನು ಉ.ಪ್ರ.ಸರಕಾರ ಮರೆಮಾಚುತ್ತಿದೆ: ಅಖಿಲೇಶ್ ಯಾದವ್
ಲಕ್ನೋ: ಕೋವಿಡ್ನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಉತ್ತರಪ್ರದೇಶ ಸರಕಾರ ಮರೆಮಾಚುತ್ತಿದೆ ಎಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರು ರವಿವಾರ ಆರೋಪಿಸಿದ್ದಾರೆ.
‘‘ಸರಕಾರ ಕೋವಿಡ್ ಸಾವಿಗೆ ಸಂಬಂಧಿಸಿದ ಅಂಕಿ-ಅಂಶವನ್ನು ನೀಡಿಲ್ಲ. ಅಲ್ಲದೆ ಜನರಿಗೆ ಯಾವುದೇ ನೆರವು ನೀಡಲು ಬಯಸಿಲ್ಲ’’ ಎಂದು ಅವರು ತಿಳಿಸಿದರು.
‘‘ಪಂಚಾಯತ್ ಚುನಾವಣೆಯ ಕರ್ತವಕ್ಕೆ ತೆರಳಿದ ಕೇವಲ ಮೂವರು ಶಿಕ್ಷಕರು ಮಾತ್ರ ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂದು ಸರಕಾರ ಹೇಳಿತ್ತು. ಆದರೆ, ಅನಂತರ ಶಿಕ್ಷಕರ ಸಂಘಟನೆ ಹಾಗೂ ನಾವು ಪ್ರಶ್ನೆ ಎತ್ತಿದಾಗ, ವಾಸ್ತವವಾಗಿ ಮೃತಪಟ್ಟ ಶಿಕ್ಷಕರ ಸಂಖ್ಯೆ ಬಗ್ಗೆ ಒಪ್ಪಿಗೆ ಸೂಚಿಸಿತ್ತು’’ ಎಂದು ಅವರು ಹೇಳಿದರು.
ಉತ್ತರಪ್ರದೇಶದಲ್ಲಿ ಎಪ್ರಿಲ್ ಮೊದಲ ವಾರದಿಂದ ಕೋವಿಡ್ನಿಂದ 1600 ಶಿಕ್ಷಕರು ಹಾಗೂ ಮೂಲಭೂತ ಶಿಕ್ಷಣ ಇಲಾಖೆಯ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಶಿಕ್ಷಕರ ಸಂಘಟನೆ ಹೇಳಿತ್ತು. ಇದರಲ್ಲಿ ಶೇ. 90ರಷ್ಟು ಶಿಕ್ಷಕರು ಪಂಚಾಯತ್ ಚುನಾವಣೆಯ ಸಂದರ್ಭ ಕೋವಿಡ್ ಸೋಂಕಿಗೊಳಗಾಗಿ ಮೃತಪಟ್ಟಿದ್ದಾರೆ ಎಂದು ಅದು ತಿಳಿಸಿತ್ತು. ಆದರೆ, ಉತ್ತರಪ್ರದೇಶದ ಸಹಾಯಕ ಸಚಿವ (ಸ್ವತಂತ್ರ ಉಸ್ತವಾರಿ) ಸತೀಶ್ ಚಂದ್ರ ದ್ವಿವೇದಿ, ಈ ಸಾವುಗಳಿಗೆ ಚುನಾವಣಾ ಕರ್ತವ್ಯ ನಿರ್ವಹಿಸಿರುವುದು ಕಾರಣವೆಂದು ಹೇಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು. ಅಲ್ಲದೆ, ಕೋವಿಡ್ನಿಂದ ಕೇವಲ ಮೂವರು ಶಿಕ್ಷಕರು ಮಾತ್ರ ಮೃತಪಟ್ಟಿದ್ದಾರೆ ಎಂದು ಸರಕಾರದ ಅಂಕಿ-ಅಂಶ ತಿಳಿಸಿತ್ತು.