ಪ್ರಧಾನಿ ಮೋದಿಯೊಂದಿಗಿನ ಭೇಟಿಯಲ್ಲಿ ಸಹಕಾರಿ ಸಚಿವಾಲಯದ ಕುರಿತು ಕಳವಳ ವ್ಯಕ್ತಪಡಿಸಿದ ಪವಾರ್: ವರದಿ
ಹೊಸದಿಲ್ಲಿ, ಜು.17: ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸುಮಾರು 50 ನಿಮಿಷ ಮಾತುಕತೆ ನಡೆಸಿದರು. ಕೇಂದ್ರ ಸರಕಾರ ನೂತನವಾಗಿ ರಚಿಸಿರುವ ಸಹಕಾರ ಸಚಿವಾಲಯ ಹಾಗೂ ರೈತರ ಸಮಸ್ಯೆಯ ಕುರಿತು ಕಳವಳ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.
ರಾಜ್ಯಸಭಾ ಸಂಸದ ಶರದ್ ಪವಾರ್ ಅವರಿಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು’ ಎಂದು ಪ್ರಧಾನಿಯವರ ಕಾರ್ಯಾಲಯ ಟ್ವೀಟ್ ಮಾಡಿದ್ದು, ಉಭಯ ಮುಖಂಡರು ಚರ್ಚೆ ನಡೆಸುತ್ತಿರುವ ಫೋಟೋ ಶೇರ್ ಮಾಡಿದೆ. ಭೇಟಿಗೂ ಮುನ್ನ ಪ್ರಧಾನಿಯವರಿಗೆ ಪತ್ರ ಬರೆದಿದ್ದ ಪವಾರ್, ಸಹಕಾರ ಇಲಾಖೆ ಬಗ್ಗೆ ಅಸಮಾಧಾನ ಸೂಚಿಸಿದ್ದರು. ಸಹಕಾರಿ ಬ್ಯಾಂಕಿಂಗ್ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಇದರಲ್ಲಿ ಕೇಂದ್ರದ ಹಸ್ತಕ್ಷೇಪ ಸಂವಿಧಾನದ ಉಲ್ಲಂಘನೆಯಾಗಿದೆ ಎಂದವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಪವಾರ್- ಮೋದಿ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಎನ್ಸಿಪಿ ಮುಖಂಡ ನವಾಬ್ ಮಲಿಕ್ ‘ಮಹಾರಾಷ್ಟ್ರದ ಮುಖಂಡರೊಬ್ಬರು ಪ್ರಧಾನಿಯನ್ನು ಭೇಟಿಯಾಗಿರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ನಮ್ಮ ಕೋರಿಕೆಯನ್ನು ಪ್ರಧಾನಿ ಪರಿಗಣಿಸುತ್ತಾರೆ ಎಂಬ ನಿರೀಕ್ಷೆಯಿದೆ’ ಎಂದಿದ್ದಾರೆ.
ರಾಷ್ಟ್ರಪತಿ ಹುದ್ದೆಗೆ ಶರದ್ ಪವಾರ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎಂಬ ಊಹಾಪೋಹ ಹಾಗೂ ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್ಸಿಪಿ- ಕಾಂಗ್ರೆಸ್ ಮೈತ್ರಿಕೂಟದಲ್ಲಿ ಒಡಕು ಮೂಡಿದೆ ಎಂಬ ವರದಿಯ ನಡುವೆಯೇ ಈ ಭೇಟಿ ನಡೆದಿದೆ.