ದಾನಿಶ್ ಸಿದ್ದೀಕಿ ಮೃತಪಟ್ಟ ಕುರಿತು ಕೇಂದ್ರ ಸರಕಾರ ಏನೂ ಹೇಳುವುದಿಲ್ಲ, ಯಾಕೆಂದರೆ...: ಪಿ. ಚಿದಂಬರಂ
ಹೊಸದಿಲ್ಲಿ: ರಾಯ್ಟರ್ಸ್ ನ ಖ್ಯಾತ ಪತ್ರಕರ್ತ ದಾನಿಶ್ ಸಿದ್ದೀಕಿ ತಮ್ಮ ಕರ್ತವ್ಯದ ನಡುವೆ ಅಫ್ಘಾನಿಸ್ತಾನದ ಬೋಡ್ಲಾಕ್ ನಲ್ಲಿ ತಾಲಿಬಾನ್ ದಾಳಿಗೆ ಬಲಿಯಾಗಿದ್ದರು. ಈ ಬಗ್ಗೆ ಅಮೆರಿಕ ಸರಕಾರ ಸೇರಿದಂತೆ ಹಲವಾರು ಅಂತಾರಾಷ್ಟೃೀಯ ಗಣ್ಯರು, ಸಂಘ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿತ್ತು. ಆದರೆ ಪ್ರಧಾನಿ ಮೋದಿಯಾಗಲಿ ಕೇಂದ್ರ ಸರಕಾರವಾಗಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದ ಕುರಿತು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, "ದಾನಿಶ್ ಸಿದ್ದೀಕಿಯ ದುರಂತ ಮೃತ್ಯು ಹಾಗೂ ಹೆಚ್ಚುತ್ತಿರುವ ಹಣದುಬ್ಬರ ಈ ಎರಡು ವಿಷಯಗಳ ಕುರಿತು ಬಿಜೆಪಿ-ಎನ್ಡಿಎ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಏಕೆಂದರೆ ಈ ಎರಡೂ ವಿಷಯಗಳು ಅವರ ಸುಳ್ಳು ಹೇಳಿಕೆಗಳಾದ ʼನಮ್ಮಲ್ಲಿ ರಕ್ಷಣಾ ವ್ಯವಸ್ಥೆಯಿದೆ, ಅಭಿವೃದ್ಧಿಯಿದೆ ಮತ್ತು ಕ್ಷೇಮವಿದೆʼ ಎಂಬ ಹೇಳಿಕೆಗೆ ಅನ್ವಯಿಸುವುದಿಲ್ಲ" ಎಂದು ಕಟುವಾಗಿ ಟೀಕಿಸಿದ್ದಾರೆ.
ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್ ದಾನಿಶ್ ಸಿದ್ದೀಕಿ ಶುಕ್ರವಾರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿನ ಕಂದಹಾರ್ ಪ್ರಾಂತ್ಯದ ಬೊಡ್ಲಾಕ್ ಜಿಲ್ಲೆಯಲ್ಲಿ ಅಫ್ಘಾನ್ ಭದ್ರತಾ ಪಡೆಗಳ ಮತ್ತು ತಾಲಿಬಾನ್ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಕೊಲ್ಲಲ್ಪಟ್ಟಿದ್ದರು ಎಂದು ವರದಿಗಳು ತಿಳಿಸಿದ್ದವು.
Danish Siddique’s tragic death and soaring Inflation are two subjects on which the BJP-NDA will not comment
— P. Chidambaram (@PChidambaram_IN) July 18, 2021
Because both do not fit into the their false narrative of “we have security, development and welfare”