ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿಗೆ ಉತ್ತರಪ್ರದೇಶ ಪೊಲೀಸರು ನೀಡಿದ್ದ ನೋಟಿಸ್ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು: ಕೋಮು ಸೂಕ್ಷ್ಮ ವೀಡಿಯೊ ಟ್ವೀಟ್ ವಿಚಾರವಾಗಿ ‘ಟ್ವಿಟರ್ ಇಂಡಿಯಾ’ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರಿಗೆ ಉತ್ತರಪ್ರದೇಶ ಪೊಲೀಸರು ನೀಡಿದ್ದ ನೋಟಿಸ್ ಅನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ. ಸಾಕ್ಷಿ ಹೇಳಲು ಉತ್ತರಪ್ರದೇಶಕ್ಕೆ ಪ್ರಯಾಣಿಸಬೇಕಾಗಿಲ್ಲ ಎಂದು ಮಹೇಶ್ವರಿಗೆ ನ್ಯಾಯಾಲಯ ತಿಳಿಸಿದೆ.
ಮಹೇಶ್ವರಿಗೆ ಪೊಲೀಸರು ನೀಡಿದ್ದ ನೋಟಿಸ್ ನಲ್ಲಿ ಗಲಭೆ ನಡೆಸುವ ಉದ್ದೇಶ, ದ್ವೇಷ ಹಾಗೂ ಕ್ರಿಮಿನಲ್ ಆರೋಪಗಳನ್ನು ಹೊರಿಸಿರುವುದು 'ದುರುದ್ದೇಶಪೂರ್ವಕ' ಹಾಗೂ ಕಿರುಕುಳ ನೀಡುವ ಉದ್ದೇಶವಿದೆ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಗಾಝಿಯಾಬಾದ್ ನಲ್ಲಿ ನಡೆದ ಹಲ್ಲೆಯದ್ದು ಎನ್ನಲಾದ ಕೋಮು ಸೂಕ್ಷ್ಮ ವೀಡಿಯೊವೊಂದನ್ನು ಟ್ವಿಟರ್ ಪ್ಲಾಟ್ ಫಾರ್ಮ್ ನಲ್ಲಿ ಬಳಕೆದಾರರೊಬ್ಬರು ಅಪ್ ಲೋಡ್ ಮಾಡಿದ್ದರು. ಈ ವಿಚಾರವಾಗಿ ಮಹೇಶ್ವರಿ ಅವರಿಗೆ ನೋಟಿಸ್ ನೀಡಲಾಗಿತ್ತು.
ನ್ಯಾಯವ್ಯಾಪ್ತಿ ಮೀರಿ ಹಾಗೂ ಕಾನೂನಿನ ಪರಿಮಿತಿಯಲ್ಲಿ ಒಳಗೊಳ್ಳದೆ ಅಪರಾಧ ದಂಡಸಂಹಿತೆಯ ಸೆಕ್ಷನ್ 41ರ ಅಡಿ ನೋಟಿಸ್ ನೀಡಲಾಗಿತ್ತು. ಜೂ.17ರಂದು ಅಪರಾಧ ದಂಡಸಂಹಿತೆಯ ಸೆಕ್ಷನ್ 160ರ ಅಡಿ ಮೊದಲ ನೋಟಿಸ್ ನೀಡಲಾಗಿತ್ತು ಎಂದು ಮಹೇಶ್ವರಿ ಪರ ವಕೀಲರಾದ ಸಿ.ವಿ.ನಾಗೇಶ್ ವಾದಿಸಿದ್ದರು.
ನ್ಯಾಯಮೂರ್ತಿ ಜಿ.ನರೇಂದ್ರ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತ್ತು.