ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ಸ್ವಾತಂತ್ರ್ಯ ದಿನಾಚರಣೆಯಂದು ರೈತರಿಂದ ಟ್ರಾಕ್ಟರ್ ರ್ಯಾಲಿ
ಫೈಲ್ ಫೋಟೊ
ಚಂಡಿಗಢ, ಜು. 25: ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾರ್ಥವಾಗಿ ಸ್ವಾತಂತ್ರ ದಿನಾಚರಣೆಯಂದು ಟ್ರಾಕ್ಟರ್ ರ್ಯಾಲಿ ನಡೆಸಲು ಹರ್ಯಾಣದ ಜಿಂದ್ ಜಿಲ್ಲೆಯ ರೈತರು ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಯಾವೊಬ್ಬ ಸಚಿವರಿಗೆ ಕೂಡ ತ್ರಿವರ್ಣ ಧ್ವಜ ಆರೋಹಿಸಲು ಅವಕಾಶ ನೀಡದಿರಲು ರೈತರು ನಿರ್ಧರಿಸಿದ್ದಾರೆ.
ಈ ರ್ಯಾಲಿ ಖಾತ್ಕರ್ ಟೋಲ್ ಪ್ಲಾಝಾದಿಂದ ಆರಂಭವಾಗಿ ನಗರದತ್ತ ಸಾಗಲಿದೆ. ರೈತರು ರ್ಯಾಲಿಯ ಮಾರ್ಗ ನಕ್ಷೆ ಬಗ್ಗೆ ಸಿದ್ಧತೆ ನಡೆಸುತ್ತಿದ್ದಾರೆ. ಆಡಳಿತ ನಿರ್ಧರಿಸಿದ ಯಾವುದೇ ಇತರ ಮಾರ್ಗದಲ್ಲಿ ರ್ಯಾಲಿ ನಡೆಸಲು ಅವರು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘‘ನಾವು ನಮ್ಮ ಟ್ರಾಕ್ಟರ್ನೊಂದಿಗೆ ಬೃಹತ್ ರ್ಯಾಲಿ ನಡೆಸಲಿದ್ದೇವೆ. ಮಾರ್ಗ ನಕ್ಷೆ ರೂಪಿಸಲಿದ್ದೇವೆ ಹಾಗೂ ಆಡಳಿತಕ್ಕೆ ಸಲ್ಲಿಸಲಿದ್ದೇವೆ’’ ಎಂದು ರೈತ ನಾಯಕ ವಿಜೇಂದರ್ ಸಿಂಧು ಹೇಳಿದ್ದಾರೆ. ಸರಕಾರದ ಪರವಾಗಿ ಯಾವುದೇ ಸಚಿವರು ಅಥವಾ ನಾಯಕರು ಭೇಟಿ ನೀಡದಂತೆ ರೈತರು ಎಚ್ಚರಿಕೆ ನೀಡಿದ್ದಾರೆ. ‘‘ನಾವು ಕರಿ ಬಾವುಟ ಪ್ರದರ್ಶಿಸಲಿದ್ದೇವೆ ಹಾಗೂ ಅವರ ಭೇಟಿಯನ್ನು ವಿರೋಧಿಸಲಿದ್ದೇವೆ’’ ಎಂದು ಖೇರಾ ಖಾಪ್ನ ಸತ್ವೀರ್ ಪೆಹಲ್ವಾನ್ ತಿಳಿಸಿದ್ದಾರೆ.