ಭಾರಿ ನಿರೀಕ್ಷೆಯ ಮಮತಾ ದಿಲ್ಲಿ ಭೇಟಿ ಇಂದು
ಹೊಸದಿಲ್ಲಿ, ಜು.27: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ ಇದೇ ಮೊದಲ ಬಾರಿಗೆ ಮಂಗಳವಾರ ದಿಲ್ಲಿಗೆ ಭೇಟಿ ನೀಡಲಿರುವ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೂವರು ಕಾಂಗ್ರೆಸ್ ಮುಖಂಡರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ.
ಮುಂದಿನ ಮೂರು ದಿನಗಳಲ್ಲಿ ಮಮತಾ ಬ್ಯಾನರ್ಜಿಯವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಆದರೆ ಈ ಭೇಟಿಯ ಸಮಯ ಮತ್ತು ದಿನವನ್ನು ಬಹಿರಂಗಪಡಿಸಿಲ್ಲ. ಕಾಂಗ್ರೆಸ್ ಮುಖಂಡ ಕಮಲನಾಥ್ ಅವರ ಜತೆ ಇಂದು ಅಪರಾಹ್ನ 2 ಗಂಟೆಗೆ ದೀದಿ ಸಭೆ ನಿಗದಿಯಾಗಿದೆ. ಬಳಿಕ 3 ಗಂಟೆಗೆ ಆನಂದ್ ಶರ್ಮಾ ಹಾಗೂ ಸಂಜೆ 6:30ಕ್ಕೆ ಅಭಿಷೇಕ್ ಮನು ಸಿಂಘ್ವಿ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಸಂಜೆ 4ಕ್ಕೆ ಮೋದಿ-ದೀದಿ ಸಭೆ ನಿಗದಿಯಾಗಿದೆ. ಇದೊಂದು ಸೌಜನ್ಯದ ಭೇಟಿ ಎಂದು ಹೇಳಲಾಗಿದ್ದು, ರಾಜ್ಯಕ್ಕೆ ಕೇಂದ್ರದಿಂದ ಇರುವ ಬಾಕಿಯನ್ನು ಮತ್ತು ಅಗತ್ಯ ಪ್ರಮಾಣದ ಲಸಿಕೆ ಬಿಡುಗಡೆ ಮಾಡುವಂತೆ ಕೋರಲಿದ್ದಾರೆ ಎಂದು ತಿಳಿದುಬಂದಿದೆ.
ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಮತ್ತು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡಾ ಮಮತಾ ಅವರನ್ನು ಭೇಟಿ ಮಾಡುವ ನಿರೀಕ್ಷೆ ಇದೆ.
1996ರ ಜೈನ್ ಹವಾಲ ಹಗರಣದ ಬಗೆ ಕೃತಿ ಬರೆದಿರುವ ವಿನೀತ್ ನಾರಾಯಣ್ ಅವರನ್ನು ಕೂಡಾ ದೀದಿ ಭೇಟಿಯಾಗಿದ್ದಾರೆ. ಹಲವು ವರ್ಷಗಳ ಬಳಿಕ ಈ ಹಗರಣದ ಬಗ್ಗೆ ಮಾತನಾಡಿದ ದೀದಿಯವರನ್ನು ವಿನೀತ್ ಅಭಿನಂದಿಸಿದ್ದರು. ಹವಾಲಾ ಹಗರಣದ ಫಲಾನುಭವಿಗಳಲ್ಲಿ ಪ್ರಸಕ್ತ ಬಂಗಾಳ ರಾಜ್ಯಪಾಲರಾಗಿರುವ ಜಗ್ ದೀಪ್ ಧನ್ಕರ್ ಅವರೂ ಸೇರಿದ್ದಾರೆ ಎಂದು ಮಮತಾ ಆಪಾದಿಸಿದ್ದರು.