ಅಸ್ಸಾಂ-ಮಿಝೋರಾಂ ಗಡಿಯಲ್ಲಿ ಹಿಂಸಾಚಾರ: ಗೃಹ ಸಚಿವರ ವಿರುದ್ಧ ರಾಹುಲ್ ವಾಗ್ದಾಳಿ
ಸಂಘರ್ಷದಲ್ಲಿ ಅಸ್ಸಾಂನ ಕನಿಷ್ಠ ಐವರು ಪೊಲೀಸರು ಮೃತ್ಯು
ಗುವಾಹಟಿ: ಅಸ್ಸಾಂ-ಮಿಝೋರಾಂ ಗಡಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಅಮಿಶಾ ಶಾ ಅವರು ಜನರ ಜೀವನದಲ್ಲಿ ದ್ವೇಷ ಹಾಗೂ ಅಪನಂಬಿಕೆಯನ್ನು ಬಿತ್ತುವ ಮೂಲಕ ದೇಶವನ್ನು ವಿಫಲಗೊಳಿಸಿದ್ದಾರೆ. ದೇಶವು ಭಯಾನಕ ಪರಿಣಾಮಗಳನ್ನು ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಸೋಮವಾರದಂದು ಮಿಝೋರಾಂ ಜೊತೆಗೆ "ಸಾಂವಿಧಾನಿಕ ಗಡಿಯನ್ನು" ಸಮರ್ಥಿಸಿಕೊಳ್ಳುವಾಗ ಕನಿಷ್ಠ ಐವರು ಅಸ್ಸಾಂ ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದರು. ಎರಡು ಈಶಾನ್ಯ ರಾಜ್ಯಗಳ ನಡುವಿನ ಗಡಿ ವಿವಾದವು ರಕ್ತಸಿಕ್ತ ಸಂಘರ್ಷಕ್ಕೆ ಕಾರಣವಾಗಿದ್ದರಿಂದ ಎಸ್ಪಿ ಸೇರಿದಂತೆ 60 ಕ್ಕೂ ಹೆಚ್ಚು ಜನರು ಗಾಯಗೊಂಡರು.
"ಸಂತ್ರಸ್ತ ಕುಟುಂಬಗಳಿಗೆ ಸಂತಾಪ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ, ಹಿಂಸಾಚಾರದ ಉದ್ದೇಶಿತ ವೀಡಿಯೊವನ್ನು ಟ್ಯಾಗ್ ಮಾಡಿದ್ದಾರೆ.
"ಜನರ ಜೀವನದಲ್ಲಿ ದ್ವೇಷ ಹಾಗೂ ಅಪನಂಬಿಕೆಯನ್ನು ಬಿತ್ತುವ ಮೂಲಕ ಗೃಹ ಸಚಿವರು ದೇಶವನ್ನು ಮತ್ತೊಮ್ಮೆ ವಿಫಲಗೊಳಿಸಿದ್ದಾರೆ. ಭಾರತ ಈಗ ಅದರ ಭೀಕರ ಪರಿಣಾಮಗಳನ್ನು ಎದುರಿಸುತ್ತಿದೆ" ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹೇಳಿದ್ದಾರೆ.
ಲೈಟ್ ಮೆಷಿನ್ ಗನ್ (ಎಲ್ಎಂಜಿ) ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಮೂಲಕ ಮಿಝೋರಾಂ ಪೊಲೀಸರು ತನ್ನ ಅಧಿಕಾರಿಗಳು ಹಾಗೂ ನಾಗರಿಕರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಸ್ಸಾಂ ಸರಕಾರ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಹಿಂಸಾಚಾರದಲ್ಲಿ ಐವರು ಪೊಲೀಸರು ಸಾವನ್ನಪ್ಪಿದ್ದಾರೆ ಹಾಗೂ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಸ್ಸಾಂ ಸರಕಾರ ತಿಳಿಸಿದೆ. ಕ್ಯಾಚರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಗುಂಡಿನ ಗಾಯಗಳಾಗಿವೆ.
ಇಂದು ಸಿಲ್ಚಾರ್ಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮಿಝೋರಾಂ ಪೊಲೀಸರು ಅಸ್ಸಾಂ ಪೊಲೀಸ್ ಸಿಬ್ಬಂದಿಯ ವಿರುದ್ಧ ಲೈಟ್ ಮೆಷಿನ್ ಗನ್ಗಳನ್ನು ಬಳಸಿದ್ದಾರೆ ಎಂಬ ಸ್ಪಷ್ಟ ಸಾಕ್ಷ್ಯಗಳು ಹೊರಬರುತ್ತಿವೆ ಎಂದು ಟ್ವೀಟ್ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ವಿವಾದಿತ ಗಡಿಯಲ್ಲಿ ಶಾಂತಿಯನ್ನು ಖಾತ್ರಿಪಡಿಸಿಕೊಳ್ಳಬೇಕು ಹಾಗೂ ಸೌಹಾರ್ದಯುತವಾದ ಇತ್ಯರ್ಥವನ್ನು ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು ಎಂದು ವರದಿಯಾಗಿದೆ.
ಅಸ್ಸಾಂನ ಬರಾಕ್ ಕಣಿವೆ ಜಿಲ್ಲೆಗಳಾದ ಕ್ಯಾಚರ್, ಕರಿಂಗಂಜ್ ಹಾಗೂ ಹೈಲಕಂಡಿ ಮಿಝೋರಾಂನ ಮೂರು ಜಿಲ್ಲೆಗಳಾದ ಐಜಾಲ್, ಕೋಲಾಸಿಬ್ ಹಾಗೂ ತ್ತು ಮಾಮಿಟ್ ಜೊತೆ 164 ಕಿ.ಮೀ ಗಡಿಯನ್ನು ಹಂಚಿಕೊಂಡಿವೆ.