ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: ಕನಿಷ್ಠ 8 ಮಂದಿ ಮೃತ್ಯು, 7 ಜನ ನಾಪತ್ತೆ
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಹಾಗೂ ಏಳು ಮಂದಿ ಕಾಣೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಕ್ತಾ ಮಾತನಾಡಿ, ಕುಲ್ಲು ಜಿಲ್ಲೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಹಾಗೂ ಚಂಬಾದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಲಾಹೌಲ್-ಸ್ಪಿತಿಯಲ್ಲಿ ಮೂರು ಜನರು ಸಾವನ್ನಪ್ಪಿದ್ದಾರೆ ಹಾಗೂ ಏಳು ಮಂದಿ ಕಾಣೆಯಾಗಿದ್ದಾರೆ ಎಂದರು.
ಕುಲ್ಲುವಿನಲ್ಲಿ, ಪೂನಂ ಎಂಬ 26 ವರ್ಷದ ಮಹಿಳೆ ಹಾಗೂ ಆಕೆಯ ನಾಲ್ಕು ವರ್ಷದ ಮಗ ನಿಕುಂಜ್ ಅವರು ಪಾರ್ವತಿ ನದಿಯ ಉಪನದಿಯಾದ ಬ್ರಹ್ಮಗಂಗಾದಲ್ಲಿ ಬುಧವಾರ ಬೆಳಿಗ್ಗೆ 6: 15 ರ ಸುಮಾರಿಗೆ ಮಣಿಕರಣ್ ಬಳಿಯಲ್ಲಿದ್ದರು. ನೀರಿನ ಮಟ್ಟ ದಿಢೀರ್ ಏರಿಕೆಯಾದ ಬಳಿಕ ಕೊಚ್ಚಿಕೊಂಡು ಹೋದರು ಎಂದು ಅವರು ಹೇಳಿದರು.
ಪ್ರವಾಹದಲ್ಲಿ ಇನ್ನೊಬ್ಬ ಮಹಿಳೆ ಮತ್ತು ಒಬ್ಬ ಪುರುಷ ಸಹ ಕೊಚ್ಚಿ ಹೋಗಿದ್ದಾರೆ ಎಂದು ಅವರು ಹೇಳಿದರು.
ಲಾಹೌಲ್ನ ಉದಯಪುರದಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಭಾರೀ ಮಳೆ ಯಿಂದಾಗಿ ಉಂಟಾದ ಪ್ರವಾಹದಲ್ಲಿ ಇಬ್ಬರು ಡೇರೆ ಕಾರ್ಮಿಕರು ಹಾಗೂ ಖಾಸಗಿ ಜೆಸಿಬಿ ಕೊಚ್ಚಿ ಹೋಗಿದೆ ಎಂದು ಮೊಕ್ತಾ ಹೇಳಿದರು.
ಮೂರು ಜನರು ಸಾವನ್ನಪ್ಪಿದ್ದಾರೆ ಹಾಗೂ ಏಳು ಕಾರ್ಮಿಕರು ಇನ್ನೂ ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು.