ಎಲ್ಗಾರ್ ಪರಿಷತ್ ಪ್ರಕರಣ: ಹನಿಬಾಬು ವೈದ್ಯಕೀಯ ವರದಿ ಕೋರಿದ ಬಾಂಬೆ ಹೈಕೋರ್ಟ್
Photo: twitter.com/hanybabu
ಮುಂಬೈ, ಜು. 29: ಪ್ರಸಕ್ತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿಯಾಗಿರುವ ದಿಲ್ಲಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾದ್ಯಾಪಕ ಹನಿ ಬಾಬು ಅವರ ಇತ್ತೀಚೆಗಿನ ಆರೋಗ್ಯದ ವರದಿ ಸಲ್ಲಿಸುವಂತೆ ನಗರದ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಬಾಂಬೆ ಉಚ್ಚ ನ್ಯಾಯಾಲಯ ಗುರುವಾರ ನಿರ್ದೇಶಿಸಿದೆ. ಹನಿ ಬಾಬು ಅವರು ಕಣ್ಣಿನ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಹನಿ ಬಾಬು ಅವರ ಪರ ನ್ಯಾಯವಾದಿ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಹನಿ ಬಾಬು ಅವರಿಗೆ ಅನಾರೋಗ್ಯದ ನೆಲೆಯಲ್ಲಿ ಜಾಮೀನು ನೀಡುವಂತೆ ಕೋರಿ ಹನಿ ಬಾಬು ಅವರ ಪತ್ನಿ ಜೆನ್ನಿ ರೊವೆನ್ನಾ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂದೆ ಹಾಗೂ ಎನ್.ಜೆ. ಜಾಮ್ದಾರ್ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು.
ಹನಿ ಬಾಬು ಅವರ ಕಣ್ಣಿ ನರಗಳು ಊದಿಕೊಂಡಿವೆ. ಆದುದರಿಂದ ಅವರಿಗೆ ಎಂಆರ್ಐ ಸ್ಕಾನ್ ಹಾಗೂ ಇತರ ಪರೀಕ್ಷೆಗಳ ಅಗತ್ಯ ಇದೆ ಎಂದು ವೈದ್ಯಕೀಯ ವರದಿ ಸೂಚಿಸಿದ ಹಿನ್ನೆಲೆಯಲ್ಲಿ ಮುಂದಿನ ಆದೇಶ ನೀಡುವ ವರೆಗೆ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವುದನ್ನು ಮುಂದುವರಿಸುವಂತೆ ಹೈಕೋರ್ಟ್ ತಿಳಿಸಿತ್ತು.