ಕೇರಳ: ದಂತ ವೈದ್ಯಕೀಯ ವಿದ್ಯಾರ್ಥಿನಿಯನ್ನು ಗುಂಡಿಟ್ಟು ಹತ್ಯೆಗೈದು ಯುವಕ ಆತ್ಮಹತ್ಯೆ
photo: thenewindianexpress
ಕೊಚ್ಚಿ,ಜು.30: ಇಲ್ಲಿಂದ 35 ಕಿ.ಮೀ.ದೂರದ ಕೋತಮಂಗಲಂ ಬಳಿಯ ನೆಲ್ಲಿಕುಜಿಯಲ್ಲಿ ಶುಕ್ರವಾರ ದಂತ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳನ್ನು ಗುಂಡಿಟ್ಟು ಹತ್ಯೆಗೈದ ಯುವಕನೋರ್ವ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅಪರಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಹಂತಕನನ್ನು ರಾಖಿಲ್ (24) ಎಂದು ಗುರುತಿಸಲಾಗಿದೆ. ಹತ್ಯೆಯಾದ ಮಾನಸಾ ಪಿ.ವಿ.(24) ಕೋತಮಂಗಲಂ ಇಂದಿರಾ ಗಾಂಧಿ ಡೆಂಟಲ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಇಬ್ಬರೂ ಕಣ್ಣೂರು ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರ ನಡುವಿನ ವೈಯಕ್ತಿಕ ದ್ವೇಷ ಕೊಲೆಗೆ ಕಾರಣವಾಗಿರುವಂತಿದೆ. ನಾವು ಹೆಚ್ಚಿನ ವಿವರಗಳನ್ನು ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದ ಪೊಲೀಸರು,ವಿದ್ಯಾರ್ಥಿನಿ ವಾಸವಾಗಿದ್ದ ಪಿಜಿ ಬಳಿ ಘಟನೆ ನಡೆದಿದೆ, ಆಕೆಗೆ ಗುಂಡಿಕ್ಕಲು ಹಂತಕ ಮನೆಯನ್ನು ಪ್ರವೇಶಿಸಿದ್ದ ಎಂದರು.
ರಾಖಿಲ್ ತಮ್ಮ ಪುತ್ರಿಗೆ ತೊಂದರೆ ಕೊಡುತ್ತಿದ್ದಾನೆ ಮತ್ತು ಆಕೆಯನ್ನು ಹಿಂಬಾಲಿಸುತ್ತಿದ್ದಾನೆ ಎಂದು ಮಾನಸಾಳ ಹೆತ್ತವರು ಈ ಹಿಂದೆ ಕಣ್ಣೂರು ಪೊಲೀಸರಿಗೆ ದೂರು ಸಲ್ಲಿಸಿದ್ದರು.