ಮಿಝೋರಾಂಗೆ ಭೇಟಿ ನೀಡದಂತೆ ಸಲಹೆ: ಅಸ್ಸಾಂ ಮುಖ್ಯಮಂತ್ರಿ ಸಮರ್ಥನೆ
ಗುವಾಹಟಿ, ಜು.30: ಮಿಝೋರಂ ರಾಜ್ಯಕ್ಕೆ ಪ್ರಯಾಣಿಸದಂತೆ ರಾಜ್ಯದ ಜನತೆಗೆ ಸಲಹಾ ಪತ್ರ ಜಾರಿಗೊಳಿಸಿರುವುದನ್ನು ಅಸ್ಸಾಂ ಸರಕಾರ ಸಮರ್ಥಿಸಿಕೊಂಡಿದೆ. ನೆರೆಯ ರಾಜ್ಯ(ಮಿಝೋರಂ)ದ ಜನತೆ ಆಧುನಿಕ ಆಯುಧ ಹೊಂದಿದ್ದು ಈಗ ಎರಡು ರಾಜ್ಯಗಳ ನಡುವೆ ಉದ್ಭವಿಸಿರುವ ವಿವಾದದ ಹಿನ್ನೆಲೆಯಲ್ಲಿ ಇದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಅಸ್ಸಾಂ ಸರಕಾರ ಪ್ರಜೆಗಳಿಗೆ ಸಲಹೆ ನೀಡಿತ್ತು. ಈ ಬಗ್ಗೆ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿತ್ತು. ಮಿಝೋರಂನ ಕೆಲವು ಸಂಘಟನೆಗಳು, ವಿದ್ಯಾರ್ಥಿಗಳು, ಯುವ ಸಂಘಟನೆಗಳು ಅಸ್ಸಾಂ ರಾಜ್ಯ ಮತ್ತು ಇಲ್ಲಿನ ಜನತೆಯ ವಿರುದ್ಧ ನಿರಂತರ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದು ಈ ಬಗ್ಗೆ ವೀಡಿಯೊ ದಾಖಲೆಗಳಿವೆ ಎಂದು ಸರಕಾರ ಹೇಳಿತ್ತು. ಈ ಬಗ್ಗೆ ಕಾಂಗ್ರೆಸ್ ಸಹಿತ ಹಲವರು ಟೀಕಿಸಿದ್ದರು. ಶುಕ್ರವಾರ ಸರಕಾರದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ, ಮಿಝೋರಾಂನ ನಾಗರಿಕರು ಎಕೆ-47 ಮತ್ತು ಸ್ನಿಫರ್ ಗನ್ನಂತಹ ಅತ್ಯಾಧುನಿಕ ಆಯುಧ ಹಿಡಿದು ತಿರುಗಾಡುತ್ತಿದ್ದಾರೆ ಎಂದಿದ್ದಾರೆ.