ಬಿಜೆಪಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಹರಡಲು 'ಇ-ರಾವಣರ' ಬಳಕೆ: ಅಖಿಲೇಶ್ ಆರೋಪ
ಲಕ್ನೋ : ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ "ಅಪಪ್ರಚಾರ ಮತ್ತು ದ್ವೇಷ" ಹರಡಲು ಬಿಜೆಪಿ 'ಇ-ರಾವಣ'ರನ್ನು ಬಳಸುತ್ತಿದೆ, ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ತನ್ನ ರಾಜಕೀಯ ಎದುರಾಳಿಗಳನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸಲು ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವ ಕುರಿತು ತಮ್ಮ ಪಕ್ಷ ಕಾರ್ಯಕರ್ತರನ್ನು ಎಚ್ಚರಿಸಿರುವ ಅಖಿಲೇಶ್, ಅವರಿಗೆ ಶಿಸ್ತುಬದ್ಧ ಉತ್ತಮ ನಡವಳಿಕೆ ತೋರುವಂತೆ ಸಲಹೆ ನೀಡಿದ್ದಾರೆ.
"ರಾಕ್ಷಸ ಅರಸ ರಾವಣನಂತೆ ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ 'ಇ-ರಾವಣರನ್ನು' ಬಳಸಿ ದ್ವೇಷ ಮತ್ತು ಅಪಪ್ರಚಾರ ಹರಡುತ್ತಿದೆ. ರಾವಣನಂತೆ, ಅವರು ಸಾಮಾಜಿಕ ಜಾಲತಾಣದಲ್ಲಿ ಮಾರುವೇಷದಲ್ಲಿದ್ದುಕೊಂಡು ಸುಳ್ಳು ಮತ್ತು ವದಂತಿಗಳನ್ನು ಹರಡುತ್ತಿದ್ದಾರೆ," ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.
"ನಕಲಿ ಬಿಜೆಪಿ ನಾಯಕರು" ಸಮಾಜವಾದಿ ಪಕ್ಷದ ಬೆಂಬಲಿಗರಂತೆ ತಮ್ಮನ್ನು ಪರಿಚಯಿಸಿಕೊಂಡು ಅಸಭ್ಯ ಹೇಳಿಕೆಗಳನ್ನು ಪೋಸ್ಟ್ ಹಾಗೂ ಫಾರ್ವರ್ಡ್ ಮಾಡುತ್ತಾರೆ," ಎಂದು ಅವರು ಆರೋಪಿಸಿದರು.