ಈಶಾನ್ಯ ಭಾರತ ಎಂದಿಗೂ ಒಂದೇ ಆಗಿರುತ್ತದೆ: ಮಿಝೋರಾಂ ಸಿಎಂ
ಐಜ್ವಾಲ್, ಜು.31: ಅಸ್ಸಾಂ-ಮಿಝೋರಾಂ ಗಡಿಯಲ್ಲಿ ಭೀಕರ ಹಿಂಸಾಚಾರಗಳ ನಡುವೆಯೇ ಮಿಝೋರಾಂ ಮುಖ್ಯಮಂತ್ರಿ ಝೋರಾಮ್ತಂಗಾ ಅವರು ಈಶಾನ್ಯ ಭಾರತವು ಎಂದಿಗೂ ಒಂದೇ ಆಗಿರಲಿದೆ ಎಂದು ಹೇಳಿದ್ದಾರೆ.
ಅಸ್ಸಾಮಿನ ಕಾಚಾರ್ ಜಿಲ್ಲೆಗೆ ಹೊಂದಿಕೊಂಡಿರುವ ಕೊಲಾಸಿಬ್ ಜಿಲ್ಲೆಯಲ್ಲಿ ಮಿಝೋರಾಂನ ಅನಿವಾಸಿಗಳ ಚಲನವಲನಗಳ ಮೇಲೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿರುವ ಅಧಿಸೂಚನೆಯನ್ನೂ ಝೋರಾಮ್ತಂಗಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಗುರುವಾರ ಪ್ರವಾಸ ಸಲಹಾ ಸೂಚಿಯನ್ನು ಹೊರಡಿಸಿದ್ದ ಅಸ್ಸಾಂ, ಮಿಝೋರಾಂಗೆ ಪ್ರಯಾಣಿಸದಂತೆ ತನ್ನ ಪ್ರಜೆಗಳಿಗೆ ಸೂಚಿಸಿತ್ತಲ್ಲದೆ, ಮಿಝೋರಾಂನಲ್ಲಿರುವ ತನ್ನ ಪ್ರಜೆಗಳಿಗೆ ಹೆಚ್ಚಿನ ಎಚ್ಚರಿಕೆಯಿಂದ ಇರುವಂತೆಯೂ ತಿಳಿಸಿತ್ತು.
ಈ ನಡುವೆ ಸೋಮವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ಪೊಲೀಸರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಗಡಿವಿವಾದ ಕುರಿತು ಉದ್ವಿಗ್ನತೆ ಮುಂದುವರಿದಿದೆ. ಹಿಂಸಾಚಾರದಲ್ಲಿ ಅಸ್ಸಾಮಿನ ಏಳು ಜನರು ಕೊಲ್ಲಲ್ಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.