ಮಣಿಪುರ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಗೋವಿಂದ್ ದಾಸ್ ಬಿಜೆಪಿಗೆ ಸೇರ್ಪಡೆ
ಹೊಸದಿಲ್ಲಿ: ಮಣಿಪುರ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಗೋವಿಂದ್ ದಾಸ್ ಕೊಂತೌಜಮ್ ರವಿವಾರ ಬಿಜೆಪಿ ಸೇರಿದ್ದಾರೆ. ದಿಲ್ಲಿಯಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ರಾಜ್ಯ ಉಸ್ತುವಾರಿ ಡಾ.ಸಂಬಿತ್ ಪಾತ್ರ ಅವರು ಗೋವಿಂದ್ ದಾಸ್ ಅವರನ್ನು ಔಪಚಾರಿಕವಾಗಿ ಬಿಜೆಪಿಗೆ ಸ್ವಾಗತಿಸಿದರು. ಗೋವಿಂದ್ ದಾಸ್ ನಿರ್ಗಮನ ಕಾಂಗ್ರೆಸ್ ಗೆ ತೀವ್ರ ಹಿನ್ನಡೆಯಾಗಿದೆ.
"ನಾನೂ ಕಾಂಗ್ರೆಸ್ ನಲ್ಲಿದ್ದೆ. ಮಣಿಪುರದಲ್ಲಿ ಈ ಹಿಂದೆ ಹಿಂಸೆ, ಮುಷ್ಕರ, ಬಂದ್ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಸರಕಾರ ಬಂದಾಗಿನಿಂದ ಎಲ್ಲವೂ ಶಾಂತಿಯುತವಾಗಿದೆ" ಎಂದು ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ಹೇಳಿದರು.
ಮುಂದಿನ ವರ್ಷ ಮಣಿಪುರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಳೆದ ತಿಂಗಳು ಕಾಂಗ್ರೆಸ್ ನ ಮಣಿಪುರ ಘಟಕದ ಮುಖ್ಯಸ್ಥ ಸ್ಥಾನಕ್ಕೆ ಗೋವಿಂದ್ ದಾಸ್ ಕೊಂತೌಜಮ್ ರಾಜೀನಾಮೆ ನೀಡಿದ್ದರು. ಇಂಫಾಲದ ಕಾಂಗ್ರೆಸ್ ಭವನದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು'ವೈಯಕ್ತಿಕ ಕಾರಣಗಳಿಂದ' ಈ ಹೆಜ್ಜೆ ಇಟ್ಟಿದ್ದೇನೆ ಎಂದು ಗೋವಿಂದ್ ದಾಸ್ ಅವರು ಹೇಳಿದ್ದರು.
ಮಾಜಿ ಸಚಿವ ಗೋವಿಂದ್ ದಾಸ್ ಅವರು ಮಣಿಪುರದ ಬಿಷ್ಣುಪುರದಿಂದ ಆರು ಬಾರಿ ಕಾಂಗ್ರೆಸ್ ಶಾಸಕರಾಗಿದ್ದಾರೆ. ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರಾಗಿದ್ದರು. ' ಡಿಸೆಂಬರ್ 2020 ರಲ್ಲಿ ಎಂಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.