ಧನ್ಬಾದ್ ನ್ಯಾಯಾಧೀಶರ ಸಾವು ಪ್ರಕರಣ: ಪತಾರ್ದಿಹ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಮಾನತು
ಲಕ್ನೋ, ಆ. 1: ಧನ್ಬಾದ್ ನಲ್ಲಿ ಕಳೆದ ವಾರ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಸಂದರ್ಭ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಸಾವನ್ನಪ್ಪಲು ಕಾರಣವಾದ ‘ಹಿಟ್ ಆ್ಯಂಡ್ ರನ್’ ಪ್ರಕರಣಕ್ಕೆ ಸಂಬಂಧಿಸಿ ಪತಾರ್ದಿಹ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಉಮೇಶ್ ಮಾಂಝಿ ಅವರನ್ನು ರವಿವಾರ ಅಮಾನತುಗೊಳಿಸಲಾಗಿದೆ.
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಆಟೊ ಕಳವಾದ ಬಗ್ಗೆ ಶುಕ್ರವಾರ ಮುಂಜಾನೆ ದೂರು ಸ್ವೀಕರಿಸಿದ್ದರೂ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ಇರುವ ಕಾರಣಕ್ಕೆ ಎಸ್ಎಸ್ಪಿ ಸಂಜೀವ್ ಕುಮಾರ್ ಅವರು ಉಮೇಶ್ ಮಾಂಝಿ ಅವರನ್ನು ಅಮಾನತುಗೊಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾದ ಇಬ್ಬರು ಆರೋಪಿಗಳು ಕೂಡ ಪತಾರ್ಧಿಹ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಕ್ಕೆ ಸೇರಿದವರು. ನ್ಯಾಯಾಧೀಶರಿಗೆ ಢಿಕ್ಕಿ ಹೊಡೆಸಲು ಬಳಸಲಾದ ಆಟೋ ರಿಕ್ಷಾ ಕೂಡ ಅಲ್ಲಿ ಪತ್ತೆಯಾಗಿದೆ.
ಆಟೋ ಕಳವಾಗಿದೆ ಎಂದು ದೂರು ದಾಖಲಿಸಿದ ಆಟೋದ ಮಾಲಕಿ ಸುಗ್ನಿ ದೇವಿಯ ಪತಿ ರಾಮ್ದೇವ್ ಲೊಹ್ರಾನನ್ನು ಪ್ರಕರಣದ ತನಿಖೆಗೆ ರೂಪಿಸಲಾದ ವಿಶೇಷ ತನಿಖಾ ತಂಡ ಬಂಧಿಸಿದೆ. ಲೊಹ್ರಾನ ವಿರುದ್ಧ ಧನ್ಬಾದ್ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಆತನನ್ನು ಹಲವು ಬಾರಿ ಬಂಧಿಸಲಾಗಿತ್ತು.