ಸ್ಪಷ್ಟನೆ ಕೋರುವ ಬದಲು ಮಹಿಳೆಯರಿಗೆ ಹುದ್ದೆ ಖಾಯಂಗೊಳಿಸುವ ಆದೇಶ ಅನುಷ್ಠಾನಗೊಳಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಆ. 2: ಮಹಿಳೆಯರಿಗೆ ಹುದ್ದೆ ಖಾಯಂಗೊಳಿಸುವಂತೆ ಸೇನೆಗೆ ನಿರ್ದೇಶಿಸಿದ ತೀರ್ಪಿನ ಕುರಿತು ಸ್ಪಷ್ಟನೆ ಕೋರಿ ಕೇಂದ್ರ ಸರಕಾರ ಸಲ್ಲಿಸಿದ ವಿವಿಧ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ತೀರ್ಪು ನೀಡಿದ ಬಳಿಕ ಸ್ಪಷ್ಟನೆ ಕೋರಿ ವಿವಿಧ ಅರ್ಜಿಯನ್ನು ಸಲ್ಲಿಸುವುದು ‘ಫ್ಯಾಶನ್’ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಎಂ.ಆರ್. ಶಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ತೀರ್ಪಿನ ಕುರಿತು ಅಸಮಾಧಾನ ಉಂಟಾದರೆ, ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಲಯ ಕೇಂದ್ರ ಸರಕಾರಕ್ಕೆ ತಿಳಿಸಿತು. ನೀವು ತೀರ್ಪನ್ನು ಅಕ್ಷರಶಃ ಅನುಷ್ಠಾನಗೊಳಿಸಿ ಎಂದು ನ್ಯಾಯಾಮೂರ್ತಿ ಚಂದ್ರಚೂಡ ಅವರು ಕೇಂದ್ರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಬಲ್ಬೀರ್ ಸಿಂಗ್ ಅವರಿಗೆ ತಿಳಿಸಿದರು. ‘‘ಇದು ತೀರ್ಪಿ ಕುರಿತು ಸಮಯ ಕಳೆಯುವ ಪ್ರಯತ್ನವಾಗಿದೆ’’ ಎಂದು ಕೂಡ ಅವರು ಹೇಳಿದರು. ಕೇಂದ್ರ ಸರಕಾರವು ವಿವಿಧ ಮನವಿಗಳನ್ನು ಸಲ್ಲಿಬಾರದು. ಇದು ಉತ್ತಮ ಪದ್ಧತಿ ಅಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ಹೇಳಿದರು.