ಡಾ.ಸುಬ್ಬಯ್ಯ ಕೊಲೆ ಪ್ರಕರಣ: 7 ಆರೋಪಿಗಳಿಗೆ ಗಲ್ಲು ಶಿಕ್ಷೆ ಘೋಷಣೆ
ಚೆನ್ನೈ,ಆ.6: ಏಳು ವರ್ಷಗಳ ಹಿಂದೆ ನಡೆದ ಚೆನ್ನೈ ಮೂಲದ ನರರೋಗ ಶಾಸ್ತ್ರಜ್ಞ ಡಾ.ಎಸ್.ಡಿ.ಸುಬ್ಬಯ್ಯ ಅವರ ಕೊಲೆ ಪ್ರಕರಣದ ಹತ್ತು ಆರೋಪಿಗಳ ಪೈಕಿ ಏಳು ಮಂದಿ ನಗರದ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಗಲ್ಲುಶಿಕ್ಷೆ ಘೋಷಿಸಲ್ಪಟ್ಟ ಆರೋಪಿಗಳಲ್ಲಿ ಇಬ್ಬರು ನ್ಯಾಯವಾದಿಗಳು ಕೂಡಾ ಇದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಡಾ. ಸುಬ್ಬಯ್ಯ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಾಸಿಕ್ಯೂಶನ್ ವಾದಿಸಿದೆ.
ಇತರ ಇಬ್ಬರು ಆರೋಪಿಗಳಿಗೆ ಎರಡು ಪಟ್ಟು ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದ್ದರೆ, ಮಾಫಿ ಸಾಕ್ಷಿದಾರನಾಗಿ ಬದಲಾದ ಇನ್ನೋರ್ವ ಆರೋಪಿಗೆ ಯಾವುದೇ ಶಿಕ್ಷೆ ವಿಧಿಸದೆ ಬಿಡುಗಡೆಗೊಳಿಸಲಾಗಿದೆ. ಎಲ್ಲಾ ಒಂಭತ್ತು ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ದೃಢಪಟ್ಟಿರುವುದಾಗಿ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಐ.ಎಸ್.ಅಲ್ಲಿ ತೀರ್ಪು ಘೋಷಿಸುತ್ತಾ ತಿಳಿಸಿದರು.
2013ರ ಸೆಪ್ಟೆಂಬರ್ 14ರಂದು ಗುಂಪೊಂದು ಡಾ.ಸುಬ್ಬಯ್ಯ ಅವರು ಅಣ್ಣಾಮಲೈಪುರಂನ ಬಿಲ್ರೋಥ್ ಆಸ್ಪತ್ರೆಯಿಂದ ಹೊರಬರುತ್ತಿದ್ದಾಗ ಮಾರಕಾಯುಧಗಳಿಂದ ದಾಳಿ ನಡೆಸಿ ಹತ್ಯೆಗೈದಿದ್ದರು. ಗಂಭೀರ ಗಾಯಗೊಂಡ ಸುಬ್ಬಯ್ಯ ಅವರು ಹತ್ತು ದಿನಗಳ ಬಳಿಕ ಅವರು ಸೆಪ್ಟೆಂಬರ್ 23ರಂದು ಕೊನೆಯುಸಿರೆಳೆದರು.
ತರುವಾಯ ಪೊಲೀಸರು ಆರೋಪಿಗಳಾದ ಡಾ. ಜೇಮ್ಸ್ ಸತೀಶ್ ಕುಮಾರ್, ಆತನ ಅನುಚರ ಮುರುಗನ್, ಸೆಲ್ವ ಪ್ರಕಾಶ್, ಇಯ್ಯಪ್ಪನ್, ಶಾಲಾ ಪ್ರಾಧ್ಯಾಪಕ ಪೊನ್ನುಸ್ವಾಮಿ, ಆತನ ಪತ್ನಿ ಪಿ. ಮೇರಿ ಪುಷ್ಪಂ, ನ್ಯಾಯವಾದಿತ ಪಿ.ಬಾಸಿಲ್, ಪಿ.ಬೋರಿಸ್ ಹಾಗೂ ಯೇಸುರಾಜನ್ ಅವರನ್ನು ಬಂಧಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಬಿ.ವಿಲಿಯಮ್ಸ್ ತಲೆಮರೆಸಿಕೊಂಡಿದ್ದನಾದರೂ, 2018ರ ಆಗಸ್ಟ್ನಲ್ಲಿ ಆತ ಪೊಲೀಸರಿಗೆ ಶರಣಾಗಿದ್ದ.