ಭಾರತದ ಹಾಕಿ ಗೆಲುವನ್ನು ಪರೋಕ್ಷವಾಗಿ ಉಲ್ಲೇಖಿಸಿ ವಿಪಕ್ಷಗಳನ್ನು ಟೀಕಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (File Photo: PTI)
ಹೊಸದಿಲ್ಲಿ: ಭಾರತದ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವುದನ್ನು ಪರೋಕ್ಷವಾಗಿ ಉಲ್ಲೇಖಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳನ್ನು ಟಾರ್ಗೆಟ್ ಮಾಡಿದ್ದಾರಲ್ಲದೆ ವಿಪಕ್ಷಗಳು ರಾಜಕೀಯ ಲಾಭಗಳಿಗಾಗಿ "ಸ್ವಯಂ ಗೋಲುಗಳನ್ನು'' ಬಾರಿಸುತ್ತಿವೆಯೆಂದು ಹೇಳಿದ್ದಾರೆ.
"ಒಂದು ಕಡೆಯಲ್ಲಿ ನಮ್ಮ ದೇಶ, ನಮ್ಮ ಯುವಜನತೆ ಇಷ್ಟೊಂದು ಸಾಧನೆಗಳನ್ನು ಮಾಡುತ್ತಿದ್ದಾರೆ ಹಾಗೂ ಗೆಲುವಿನ ಗೋಲ್ ಬಾರಿಸುತ್ತಿದ್ದಾರೆ. ಅದೇ ಸಮಯ ಇನ್ನು ಕೆಲ ಜನರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಸ್ವಯಂ-ಗೋಲುಗಳನ್ನು ಬಾರಿಸುತ್ತಿದ್ದಾರೆ. ದೇಶಕ್ಕೆ ಏನು ಬೇಕು, ದೇಶ ಏನು ಸಾಧನೆ ಮಾಡುತ್ತಿದೆ ಹಾಗೂ ದೇಶ ಹೇಗೆ ಬದಲಾಗುತ್ತಿದೆ ಎಂಬುದರ ಬಗ್ಗೆ ಅವರಿಗೆ ಚಿಂತೆಯೇ ಇಲ್ಲ,'' ಎಂದು ಉತ್ತರ ಪ್ರದೇಶ ರಾಜ್ಯದ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳೊಂದಿಗೆ ನಡೆದ ವರ್ಚುವಲ್ ಸಂವಾದದ ವೇಳೆ ಪ್ರಧಾನಿ ಹೇಳಿದರು.
ಪೆಗಾಸಸ್ ಬೇಹುಗಾರಿಕೆ ಆರೋಪಗಳ ಹಿನ್ನೆಲೆಯಲ್ಲಿ ವಿಪಕ್ಷಗಳು ಸಂಸತ್ ಕಲಾಪಗಳಿಗೆ ನಿರಂತರ ಅಡ್ಡಿಯುಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿಯ ಹೇಳಿಕೆ ಬಂದಿದೆ.