ಅಸ್ಸಾಂ ಪೊಲೀಸರ ಸಾವಿಗೆ ಮೊದಲ ಬಾರಿ ವಿಷಾದ ವ್ಯಕ್ತಪಡಿಸಿದ ಮಿಝೋರಾಂ
photo: ANI
ಹೊಸದಿಲ್ಲಿ: ಅಸ್ಸಾಂನ ಆರು ಮಂದಿ ಪೊಲೀಸರ ಸಾವಿಗೆ ಮಿಝೋರಾಂ ಸರಕಾರ ಮೊದಲ ಬಾರಿಗೆ ವಿಷಾದ ವ್ಯಕ್ತಪಡಿಸಿದೆ. ನೆರೆಯ ರಾಜ್ಯಕ್ಕೆ ಪ್ರಯಾಣಿಸದಂತೆ ಸಲಹೆ ನೀಡುವ ಎಚ್ಚರಿಕೆಯನ್ನು ರದ್ದುಗೊಳಿಸುವುದಾಗಿ ಅಸ್ಸಾಂ ಸರಕಾರ ಹೇಳಿದೆ. ಕಳೆದ ತಿಂಗಳು ಗಡಿ ವಿವಾದ ಭುಗಿಲೆದ್ದ ನಂತರ ಉದ್ವಿಗ್ನತೆಯನ್ನು ತಣಿಸಲು ಎರಡು ರಾಜ್ಯಗಳ ನಡುವಿನ ಮಾತುಕತೆಗಳ ಬಳಿಕ ಈ ಘೋಷಣೆಗಳು ಬಂದಿವೆ.
ಹಳೆಯ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಎರಡು ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಮಿಝೋರಾಂನ 10 ಸೇರಿದಂತೆ ಸುಮಾರು 45 ಜನರು ಗಾಯಗೊಂಡಿದ್ದಾರೆ.
ಮಿಝೋರಾಂ ರಾಜಧಾನಿ ಐಜ್ವಾಲ್ನಲ್ಲಿ ಇಂದು ನಡೆದ ಮಾತುಕತೆಯ ಭಾಗವಾಗಿದ್ದ ಸಚಿವ ಅತುಲ್ ಬೋರಾ, "ಅಸ್ಸಾಂ ರಾಜ್ಯವು ಮಿಝೋರಾಂಗೆ ಪ್ರಯಾಣಿಸದಂತೆ ಪ್ರಯಾಣದ ಸಲಹೆಯನ್ನು ರದ್ದುಪಡಿಸುವ ಹೆಚ್ಚಿನ ಸಾಧ್ಯತೆಯಿದೆ'' ಎಂದಿದ್ದಾರೆ.
ಅಸ್ಸಾಂ ಹಾಗೂ ಮಿಝೋರಾಂ ಗಡಿ ಪ್ರದೇಶಗಳಲ್ಲಿನ ಉದ್ವಿಗ್ನತೆಯನ್ನು ತೆಗೆದುಹಾಕಲು ಹಾಗೂ ವಿವಾದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕೇಂದ್ರದ ಒಂದು ಉಪಕ್ರಮವನ್ನು ಮುಂದುವರಿಸಲು ಒಪ್ಪಿಕೊಂಡಿವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.